ರಂಭಾಪುರಿ ಪೀಠ/ಬಾಳೆಹೊನ್ನೂರು: ‘ಬದುಕು ಬಲಗೊಳ್ಳಲು ಆಚಾರ ವಿಚಾರ ಎರಡೂ ಮುಖ್ಯ. ಮನುಷ್ಯ ಜೀವನದಲ್ಲಿ ಸತ್ಯ, ಧರ್ಮ, ಕರ್ತವ್ಯ, ಶೀಲ ಬಾಳಿನ ಉಸಿರಾಗಬೇಕು. ಏನೆಲ್ಲ ಸಿರಿ ಸಂಪತ್ತು ಗಳಿಸಿದರೂ ಮಾನವನಿಗೆ ನಿಜ ಶಾಂತಿಯಿಲ್ಲ. ಜೀವನದಲ್ಲಿ ಆದರ್ಶ ಗುರಿ ಮತ್ತು ಗುರುವನ್ನು ಆಶ್ರಯಿಸಿ ನಡೆದರೆ ಉನ್ನತಿ ಕಾಣಲು ಸಾಧ್ಯ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ರಂಭಾಪುರಿ ಪೀಠದಲ್ಲಿ ನಡೆದ ಶ್ರಾವಣ ಮಾಸದ ಪುರಾಣ ಪ್ರವಚನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ದೇಹ ಭಗವಂತನಿರುವ ಗುಡಿ. ಗುಡಿಯಲ್ಲಿ ದೇವರು ಇದ್ದರೆ ಬೆಲೆ ನೆಲೆ ಉಂಟು. ಇಲ್ಲದಿದ್ದರೆ ಏನೂ ಇಲ್ಲ. ಮನುಷ್ಯ ಸುಖ ಬಯಸುವುದು ಸಹಜ. ಆದರೆ, ಆ ದಾರಿಯಲ್ಲಿ ನಡೆಯುವುದು ಬಲು ಮುಖ್ಯ. ಶಾಂತಿ, ಸಂತೃಪ್ತಿಯ ಬದುಕಿಗೆ ಧರ್ಮವೇ ಮೂಲ ಎಂಬುದನ್ನು ಅರಿಯಬೇಕು’ ಎಂದರು.
ಪುರಾಣ ಪ್ರವಚನ ಮಾಡಿದ ಗಂವ್ಹಾರ ಹಿರೇಮಠದ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ‘ಲೋಕ ಕಲ್ಯಾಣ ಮತ್ತು ಮಾನವ ಕಲ್ಯಾಣದ ಗುರಿಯೊಂದಿಗೆ ರೇಣುಕಾಚಾರ್ಯರು ನಿರಂತರ ಶ್ರಮಿಸಿದರು. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ ಬಹು ಮುಖ್ಯವೆಂದು ಸಾರಿದ್ದನ್ನು ಮರೆಯಬಾರದು’ ಎಂದರು. ‘ರಂಭಾಪುರಿ ಬೆಳಗು’ ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಿದರು.