ಕಳಸ: ಸಂಸೆ ಗ್ರಾಮದ ಗುಳ್ಯಕ್ಕೆ ವಿಧಾನಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಮಂಗಳವಾರ ಭೇಟಿ ನೀಡಿ ವಿವಾದಿತ ತೂಗು ಸೇತುವೆಯ ಪರಿಶೀಲನೆ ನಡೆಸಿದರು.
ಸ್ಥಳೀಯರು ಬಳಸುವ ತೂಗುಸೇತುವೆಯ ಮೂಲಕವೇ ಸೋಮಾವತಿ ನದಿಯನ್ನು ಅವರು ದಾಟಿದರು. ರಸ್ತೆ, ಸೇತುವೆಗಾಗಿ ಸ್ಥಳೀಯರು ಪ್ರಾಣೇಶ್ ಅವರಲ್ಲಿ ಮನವಿ ಮಾಡಿದರು.
ಗ್ರಾಮಸ್ಥರ ಬೇಡಿಕೆ ಬಗ್ಗೆ ಮಾತನಾಡಿದ ಪ್ರಾಣೇಶ್, ಗುಳ್ಯದ ಜನರ ಸಂಕಷ್ಟ ಅರಿಯಲು ಇಲ್ಲಿಗೆ ಬಂದಿದ್ದೇನೆ. ಅಧಿಕಾರಿಗಳನ್ನು ಕೂಡ ಕರೆತಂದಿದ್ದೇನೆ. ಗುಳ್ಯಕ್ಕೆ ಸೇತುವೆಯ ಅವಶ್ಯಕತೆ ಇದೆ. ಹೊಸ ಸೇತುವೆ ಮತ್ತು ಅದರ ಸಂಪರ್ಕ ರಸ್ತೆ ನಿರ್ಮಾಣದ ಬಗ್ಗೆ ಯೋಜನಾ ವರದಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಜಿಲ್ಲಾಧಿಕಾರಿಗೆ ಈ ಸಮಸ್ಯೆ ಬಗ್ಗೆ ಈಗಾಗಲೇ ಮಾಹಿತಿ ಕೊಟ್ಟಿದ್ದೇನೆ. ಮುಂದಿನ ತಿಂಗಳು ನಡೆಯುವ ವಿಧಾನಮಂಡಲದ ಅಧಿವೇಶನದಲ್ಲಿ ಗುಳ್ಯದ ಜನರ ಸಂಕಷ್ಟದ ಬಗ್ಗೆ ದನಿ ಎತ್ತುತ್ತೇನೆ’ ಎಂದರು.
ತಹಶೀಲ್ದಾರ್ ನಂದಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಬಿಜೆಪಿ ಮುಖಂಡರಾದ ಜನ್ನಾಪುರ ರಘು, ದೀಪಕ್ ದೊಡ್ಡಯ್ಯ, ನಾಗಭೂಷಣ್, ಶೇಷಗಿರಿ, ಪರೀಕ್ಷಿತ್ ಇದ್ದರು.