ಆಲ್ದೂರು: ಸಮೀಪದ ಬಸರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೋಡಿ ಗ್ರಾಮಕ್ಕೆ ಇರುವಂತಹ ಸಂಪರ್ಕ ಸೇತುವೆ ಕುಸಿಯುವ ಭೀತಿ ಎದುರಾಗಿದೆ. ಸೇತುವೆ ದುರ್ಬಲವಾಗಿದ್ದು, ಮಳೆಯ ರಭಸಕ್ಕೆ ಜಲ್ಲಿ, ಕಾಂಕ್ರೀಟ್, ಸರಳುಗಳು ಎದ್ದು ಬಂದಿವೆ.
ಗ್ರಾಮದ ಜನರು ಆತಂಕದಲ್ಲೇ ಈ ಸೇತುವೆಯ ಮೇಲೆ ಸಂಚರಿಸುತ್ತಾರೆ. ಈ ಸೇತುವೆಯು 25 ಅಡಿ ಉದ್ದ ಇದೆ. ನರೋಡಿ ಗ್ರಾಮದ 25 ಕುಟುಂಬಗಳ ಜನರು ಪಟ್ಟಣಕ್ಕೆ ಬರಲು ಇದೇ ಸೇತುವೆಯನ್ನು ಅವಲಂಬಿಸಿದ್ದಾರೆ. ರೈತರು, ಶಾಲಾ ವಿದ್ಯಾರ್ಥಿಗಳು ಇದರ ಮೇಲೆಯೇ ಸಂಚರಿಸುತ್ತಾರೆ.
ಸ್ಥಳೀಯ ಶಾಸಕರ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸೇತುವೆಯ ಕಾಮಗಾರಿ ಆಮೆಗತಿ ಯಲ್ಲಿ ಸಾಗಿದೆ. ಶೀಘ್ರಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರಾದ ಕೃಷ್ಣೇಗೌಡ, ನಾಗೇಶ್, ಶ್ರೀನಾಥ್ ಐ.ಪಿ., ಪುಟ್ಟಸ್ವಾಮಿಗೌಡ ಒತ್ತಾಯಿಸಿದ್ದಾರೆ.
ಶಾಸಕರ ಅನುದಾನದಲ್ಲಿ ₹ 85 ಲಕ್ಷ ವೆಚ್ಚದಲ್ಲಿ ಈ ಗ್ರಾಮಕ್ಕೆ ನೂತನ ಸೇತುವೆ ನಿರ್ಮಾಣ ಆಗುತ್ತಿದೆ. ಪಿಲ್ಲರ್ಗಳನ್ನು ಮಾತ್ರ ಹಾಕಲಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಒಂದು ವರ್ಷ ಅವಧಿ ಬೇಕಾಗಿದ್ದು, ಅಲ್ಲಿಯವರೆಗೂ ಇದೇ ಸೇತುವೆಯನ್ನು ಗ್ರಾಮಸ್ಥರು ಬಳಸಬೇಕಾಗಿದೆ. ದುರ್ಬಲವಾಗಿರುವ ಸೇತುವೆ ತಾತ್ಕಾಲಿಕವಾಗಿಯಾದರೂ ಸರಿಪಡಿಸಬೇಕು ಎಂದುಸ್ಥಳೀಯ ಮುಖಂಡ ಜಗದೀಶ್ ಆಗ್ರಹಿಸಿದರು.