ಮಾಗಡಿ: ಚಾರಿತ್ರಿಕ ಕಲ್ಯಾ ಬೆಟ್ಟದ ಮೇಲಿನ ಓಲಗದ ಅರೆ ಬಂಡೆಗಳು ಸಪ್ತ ಮಾತೃಕೆಯರ ಧಾರ್ಮಿಕ ಕಥೆಗಳನ್ನು ಹೇಳುತ್ತಿವೆ ಎಂದು ಕಥೆಗಾರ ಕಲ್ಯದ ಗುಂಡೂರಾವ್ ತಿಳಿಸಿದರು. ಕಲ್ಯಾ ಬೆಟ್ಟದಲ್ಲಿನ ಕಲ್ಲೇಶ್ವರ, ಕಲಿಗಣನಾಥ ದೇಗುಲದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಅವರು ಮಾತನಾಡಿದರು.
ಪ್ರತಿ ಹುಣ್ಣಿಮೆಯ ದಿನದಂದು ಮಧ್ಯರಾತ್ರಿಯಲ್ಲಿ ಸಪ್ತಮಾತೃಕೆಯರು ಬೆಟ್ಟಕ್ಕೆ ಬರುತ್ತಾರೆ. ಸಪ್ತಮಾತೃಕೆಯರ ಬರುವ ಮುನ್ನ ಅರೆಬಂಡೆಗಳಲ್ಲಿ ನಿನಾದ ಕೇಳಿ
ಬರುತ್ತದೆ. ಕಲ್ಯಾಬೆಟ್ಟದಿಂದ ತಿರುವೆಂಗಳನಾಥ ರಂಗನಾಥ ಸ್ವಾಮಿ, ಸೋಮೇಶ್ವರ ಸ್ವಾಮಿ, ಸಾವನದುರ್ಗದ ಲಕ್ಷ್ಮೀನರಸಿಂಹ ಸ್ವಾಮಿ ಮತ್ತು ವೀರಭದ್ರ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸುವ ಸಪ್ತ ಋಷಿಗಳು ಬೆಳ್ಳಿಚುಕ್ಕೆ ಮೂಡುವ ಮುನ್ನ ಸ್ವಸ್ಥಾನಕ್ಕೆ ಹಿಂತಿರುಗುತ್ತಾರೆ ಎಂಬ ಪ್ರತೀತಿ ತಲೆಮಾರಿನಿಂದ ಬೆಳೆದು ಬಂದಿದೆ.
ಲೋಕದಲ್ಲಿ ಸರ್ವರು ಸುಖ, ಶಾಂತಿಯಿಂದ ಬದುಕಲಿ, ಮೆಳೆ–ಬೆಳೆಯಾಗಿ ಸಮೃದ್ಧಿ ನೆಲೆಸಲಿ ಎಂದು ಓಲಗದ ಅರೆ ಬಂಡೆಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ ಎಂದು ನಿವೃತ್ತ ಶಿಕ್ಷಕ ಪ್ರಹ್ಲಾದ್ ರಾವ್ ತಿಳಿಸಿದರು. ಬಸವರಾಜು, ಬೋರೇಗೌಡ, ಜಯಶಂಕರ್, ಬೊಮ್ಮಲಿಂಗಯ್ಯ ಹಾಗೂ ಭಕ್ತರು ಇದ್ದರು.