ಶೃಂಗೇರಿ: ‘ಸರಳ ವ್ಯಕ್ತಿತ್ವ ಹಾಗೂ ಸತ್ಯದ ಹಾದಿಯಲ್ಲಿ ನಡೆದ ಮಹಾತ್ಮಾ ಗಾಂಧಿ ಪ್ರತಿಪಾದಿಸಿದ ಅಹಿಂಸೆ, ಆದರ್ಶ ಮೌಲ್ಯಗಳನ್ನು ಪ್ರತಿಯೊಬ್ಬರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ. ವಿಜಯ್ ಕುಮಾರ್ ಹೇಳಿದರು.
ಶೃಂಗೇರಿ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ ಗಾಂಧಿ ಜಯಂತಿಯ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಮಾತನಾಡಿ, ‘ನದಿಗಳಲ್ಲಿ ಘನ ತ್ಯಾಜ್ಯಗಳನ್ನು ಬಿಸಾಡುವುದು, ರಸ್ತೆಯಲ್ಲಿ ಉಗುಳುವುದು ಅಕ್ಷಮ್ಯ. ಪ್ಲಾಸ್ಟಿಕ್ಗಳನ್ನು ಹೆಚ್ಚು ಬಳಸುವುದರಿಂದ ಪರಿಸರವನ್ನು ನಾವು ನಾಶ ಮಾಡುತ್ತಿದ್ದೇವೆ’ ಎಂದರು.
ಸದಸ್ಯ ಬಿ. ಅರಣ್ ಮಾತನಾಡಿ, ‘ಗಾಂಧೀಜಿ ಸ್ವಚ್ಛ ಭಾರತದ ಬಗ್ಗೆ ಕನಸು ಕಂಡಿದ್ದರು. ಸ್ವಚ್ಛ ಪರಿಸರದಿಂದ ಸಮಾಜದಲ್ಲಿ ಆರೋಗ್ಯಕರವಾದ ವಾತಾವರಣ ಕಾಣಬಹುದು ಎಂಬ ಆಶಯ ಅವರದಾಗಿತ್ತು’ ಎಂದರು.
ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಪಟ್ಟಣದಲ್ಲಿ ಜಾಥಾ ನಡೆಸಿ, ಕುವೆಂಪು ಬಸ್ ನಿಲ್ದಾಣವನ್ನು ಸ್ವಚ್ಛತೆ ಮಾಡಿದರು. ಅಧಿಕಾರಿಗಳಾದ ರವೀಂದ್ರ ಪೂಜಾರಿ, ಅಶ್ವಿನಿ ಎ.ಎಂ, ಪಲ್ಲವಿ ಇದ್ದರು.