ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆಹೊನ್ನೂರಿಗೆ ಮುಖ್ಯಮಂತ್ರಿ ಭೇಟಿ: ಸಿದ್ಧತೆ

ಅಥಣಿಯ ಬಸವರಾಜ ಶಂಕರ ಉಮರಾಣಿಗೆ ‘ರೇಣುಕಾಚಾರ್ಯ’ ಪ್ರಶಸ್ತಿ
Last Updated 6 ಮಾರ್ಚ್ 2020, 13:18 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ರಂಭಾಪುರಿ ಪೀಠದಲ್ಲಿ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಸಂಭ್ರಮ ಮುಗಿಲುಮುಟ್ಟಿದ್ದು, ಪೀಠದ ಆವರಣ ನವವಧುವಿನಂತೆ ಶೃಂಗಾರಗೊಂಡಿದೆ.

ವೀರಸೋಮೇಶ್ವರ ಸ್ವಾಮೀಜಿ ಉತ್ಸವಕ್ಕೆ ಗುರುವಾರ ಚಾಲನೆ ನೀಡಿದ್ದು, 10ರ ವರೆಗೆ ಸಡಗರದಿಂದ ನಡೆಯಲಿದೆ. ಇದೇ 7ರಂದು ಬೆಳಿಗ್ಗೆ ನಡೆಯುವ ಧರ್ಮ ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದು, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ‘ರಂಭಾಪುರಿ ಬೆಳಗು’ ಕೃತಿ ಬಿಡುಗಡೆ ಮಾಡಲಿದ್ದಾರೆ. ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಪ್ರವಾಸೋದ್ಯಮ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಟಿ.ಡಿ. ರಾಜೇಗೌಡ ಪಾಲ್ಗೊಳ್ಳುವರು. ಇದೇ ಸಂದಭದಲ್ಲಿ ಅಥಣಿಯ ಮಾಸ್ಟರ್ ಬಸವರಾಜ ಶಂಕರ ಉಮರಾಣಿ ಅವರಿಗೆ ಪೀಠದ ಅತ್ಯುನ್ನತವಾದ ‘ಜಗದ್ಗುರು ರೇಣುಕಾಚಾರ್ಯ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ₹ 1 ಲಕ್ಷ ನಗದು, ಸ್ಮರಣಿಕೆ, ಗೌರವಪತ್ರ, ಉಡುಗೊರೆ ಒಳಗೊಂಡಿದೆ. ಎಡೆಯೂರು ರೇಣುಕ ಸ್ವಾಮೀಜಿ, ಮಾನಿಹಳ್ಳಿ ಮಳೆ ಶಿವಯೋಗೀಶ್ವರ ಸ್ವಾಮೀಜಿ, ಶಿವಗಂಗೆಯ ಮಲಯ ಶಾಂತಮುನಿ ಸ್ವಾಮೀಜಿ ಭಾಗವಹಿಸಲಿದ್ದಾರೆ.

ಸಂಜೆ 8 ಗಂಟೆಗೆ ಗದಗದ ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ಸಂಗೀತ ಸೌರಭ, 10 ಗಂಟೆಗೆ ಹೊನ್ನಾಳಿ ತಾಲ್ಲೂಕಿನ ಕುಳಗಟ್ಟಿ ತಂಡದಿಂದ ‘ಕಣ್ಣೀರಲ್ಲಿ ಕರಗಿದ ಮಾಂಗಲ್ಯ’ ಎಂಬ ಸಾಮಾಜಿಕ ನಾಟಕ ನಡೆಯಲಿದೆ.

ಸಕಲ ವ್ಯವಸ್ಥೆ: ‘ಭಕ್ತರಿಗೆ ಯಾವುದೇ ತೊಂದರೆ ಉಂಟಾಗದಂತೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಮಠಕ್ಕೆ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಭಕ್ತರು ನೀಡಿದ್ದಾರೆ. ಶಿವಮೊಗ್ಗ ಸೇರಿದಂತೆ ವಿವಿಧ ಕಡೆಗಳಿಂದ ಜಾತ್ರೆಯ ಕಾರ್ಯಗಳಿಗಾಗಿ ಸ್ವಯಂ ಸೇವಕರು ಬಂದಿದ್ದಾರೆ. ಶನಿವಾರ ಬೆಳಿಗ್ಗೆ ಮಠಕ್ಕೆ ಬರುವ ಎಲ್ಲಾ ಭಕ್ತರಿಗೂ ಬೆಳಿಗ್ಗಿನ ಉಪಾಹಾರವಾಗಿ ಇಡ್ಲಿ, ಚಟ್ನಿ, ಸಾಂಬಾರ್ ಹಾಗೂ ಮಧ್ಯಾಹ್ನ ಮತ್ತು ಸಂಜೆ ಊಟದ ವ್ಯವಸ್ಥೆ ಮಾಡಲಾಗಿದೆ. ನೂರಕ್ಕೂ ಅಧಿಕ ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ’ ಎಂದು ವೀರ ಸೋಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT