‘ಹಿರಿಶಿಗರ ಗ್ರಾಮದಲ್ಲಿ ಖಾಸಗಿ ಕಾಫಿ ಎಸ್ಟೇಟ್ ಮಾಲೀಕರು ಹೇಮಾವತಿ ನದಿಗೆ ಸೇರುವ ತೊರೆಗೆ ಕಾಫಿ ಪಲ್ಪರ್ ನೀರನ್ನು ಹರಿ ಬಿಟ್ಟಿದ್ದು, ದಿನದ 24 ಗಂಟೆಯೂ ಕಾಫಿ ಪಲ್ಪರ್ ತ್ಯಾಜ್ಯ ಹರಿಯುತ್ತದೆ. ಈ ತೊರೆಯಿಂದ ಅರ್ಧ ಕಿ.ಮೀ ದೂರದಲ್ಲಿ ಹೇಮಾವತಿ ನದಿಯು ಹರಿಯುತ್ತಿದ್ದು, ತೊರೆಯ ಮೂಲಕ ತ್ಯಾಜ್ಯವು ನೇರವಾಗಿ ಹೇಮಾವತಿ ನದಿಗೆ ಸೇರುತ್ತಿದೆ. ಹಗಲಿನಲ್ಲಿ ಅಲ್ಪ ಪ್ರಮಾಣದಲ್ಲಿ ತ್ಯಾಜ್ಯವನ್ನು ಹರಿಬಿಟ್ಟರೆ, ಇಡೀ ದಿನ ಸಂಗ್ರಹವಾಗುವ ತ್ಯಾಜ್ಯದ ನೀರನ್ನು ರಾತ್ರಿ ವೇಳೆಯಲ್ಲಿ ಹರಿಯ ಬಿಡಲಾಗುತ್ತದೆ. ಕಾಫಿ ಪಲ್ಪರ್ ತ್ಯಾಜ್ಯದಿಂದ ಹೇಮಾವತಿ ನದಿಯಲ್ಲಿ ಮೀನು, ಏಡಿ, ಕಪ್ಪೆಯಂತಹ ಜಲಚರಗಳು ಸಂಪೂರ್ಣವಾಗಿ ನಾಶವಾಗಿವೆ. ಅಳಿದುಳಿದ ಜಲಚರಗಳು ಕೂಡ ಸತ್ತು ತೇಲತೊಡಗಿವೆ. ಈ ನೀರನ್ನು ಕುಡಿಯುತ್ತಿರುವುದರಿಂದ ಕಫ, ಗಂಟಲು ನೋವು, ಕೆಮ್ಮಿನಂತಹ ರೋಗಗಳು ಉಲ್ಬಣವಾಗುತ್ತಿವೆ. ಜಿಲ್ಲಾಡಳಿತ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥ ಕೃಷ್ಣ ಒತ್ತಾಯಿಸಿದ್ದಾರೆ.