ಧಾರವಾಡ: ಇಲ್ಲಿನ ನಿರ್ಮಲ ನಗರದ 11ನೇ ಅಡ್ಡ ರಸ್ತೆಯಲ್ಲಿರುವ ರುದ್ರೇಶ ಮೇಟಿ ಅವರ ಮನೆಯಲ್ಲಿ ಭಾನುವಾರ ಸಂಜೆ ಕಳ್ಳತನವಾಗಿದೆ.
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ನಡೆಸುವ ರುದ್ರೇಶ ಮೇಟಿ ಅವರು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳರು, ಅಲ್ಮೆರಾದಲ್ಲಿದ್ದ ಅಂದಾಜು 300 ಗ್ರಾಂ ತೂಕದ ಚಿನ್ನಾಭರಣ ಕದ್ದಿದ್ದಾರೆ. ಇದರ ಅಂದಾಜು ಮೊತ್ತ ₹10 ಲಕ್ಷ ಎಂದು ಮೇಟಿ ತಮ್ಮ ದೂರಿನಲ್ಲಿ ಹೇಳಿದ್ದಾರೆ.
‘ಕಳ್ಳತನ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ. ಮನೆಯಲ್ಲಿ ಆಭರಣ ಹೊರತುಪಡಿಸಿದರೆ, ಇತರ ಯಾವ ವಸ್ತುವನ್ನೂ ಕಳ್ಳರು ಮುಟ್ಟಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಶೋಧ ನಡೆದಿದೆ. ವಿದ್ಯಾಗಿರಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.