ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಕಕ್ಕೇರಿದ ವ್ಯಾಪಾರಿಗಳ ಕಲಹ

ಮೂಡಿಗೆರೆ: ವ್ಯಾಪಾರ ನಿಷೇಧಿಸಿ ತಂತಿ ಬೇಲಿ ನಿರ್ಮಾಣ
Last Updated 7 ಡಿಸೆಂಬರ್ 2020, 4:53 IST
ಅಕ್ಷರ ಗಾತ್ರ

ಮೂಡಿಗೆರೆ: ಪಟ್ಟಣದ ಎಸ್‌ಬಿಐ ಬ್ಯಾಂಕ್ ಬಳಿಯಿದ್ದ ತರಕಾರಿ, ಸೊಪ್ಪು ಮಾರಾಟಗಾರರ ಕಲಹ ತಾರಕಕ್ಕೇರಿದ್ದು, ಆ ಪ್ರದೇಶದಲ್ಲಿ ವ್ಯಾಪಾರವನ್ನು ನಿಷೇಧಿಸಿ ತಂತಿ ಬೇಲಿ ಹಾಕಲಾಗಿದೆ.

ದಶಕಗಳ ಹಿಂದೆ ಮುಕ್ತ ನಿಧಿಯಡಿಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಅಂಗಡಿ ಮಳಿಗೆಗಗಳನ್ನು ನಿರ್ಮಿಸಲಾಗಿತ್ತು. 2010-11ನೇ ಸಾಲಿನಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಅಂಗಡಿ ಮಳಿಗೆಗಳನ್ನು ಹರಾಜು ನಡೆಸಲಾಗಿತ್ತು. ಹರಾಜಿನಲ್ಲಿ ಭಾಗವಹಿಸಿದ್ದ ಬಿಡ್‌ದಾರರು ದುಬಾರಿ ಬೆಲೆ ಬಾಡಿಗೆಗೆ ಪಡೆದಿದ್ದರು. ಆದರೆ, ಹರಾಜು ನಡೆದು ದಶಕಗಳು ಸಂಭವಿಸಿದ್ದು, ಹರಾಜು ಪ್ರಕ್ರಿಯೆಯ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾ ಗಿರುವುದರಿಂದ ಇದುವರೆಗೂ ಅಂಗಡಿ ಮಳಿಗೆಗಳನ್ನು ತೆರೆದಿಲ್ಲ. ಅಂಗಡಿಗಳಿಗೆ ಅಳವಡಿಸಿದ್ದ ಬಾಗಿಲುಗಳೆಲ್ಲವೂ ತುಕ್ಕು ಹಿಡಿಯುತ್ತಿದ್ದು, ಸರ್ಕಾರದ ಯೋಜನೆ ಯೊಂದು ಹಳ್ಳ ಹಿಡಿದಂತಾಗಿದೆ.

ಈ ಅಂಗಡಿ ಮಳಿಗೆಗಳಿಗೆ ದಶಕ ಗಳಿಂದ ಶಾಶ್ವತವಾಗಿ ಬಾಗಿಲು ಹಾಕಿರು ವುದರಿಂದ ಮಳಿಗೆಗಳ ಮುಂಭಾಗದಲ್ಲಿ ಐದು ವರ್ಷಗಳಿಂದ ಸೊಪ್ಪು, ತರಕಾರಿಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದರು. ಇಲ್ಲಿ ವ್ಯಾಪಾರ ಮಾಡುತ್ತಿದ್ದವರಲ್ಲಿ ಬಹುತೇಕರು ಬೇಲೂರು ಮೂಲದ ವರ್ತಕರಾಗಿದ್ದು, ಸ್ಥಳೀಯ ವರ್ತಕರಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುತ್ತಿಲ್ಲ ಎಂಬ ಆರೋಪ ಮಾಡಲಾಗುತ್ತಿತ್ತು.

ಕೆಲವೊಮ್ಮೆ ವರ್ತಕರ ನಡುವೆಯೇ ಕಲಹ ಏರ್ಪಟ್ಟು ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದವು. ಅಲ್ಲದೆ, ಹೊರ ಭಾಗಗಳಿಂದ ಬರುವ ವರ್ತಕರು ಸೊಪ್ಪು, ತರಕಾರಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡು ತ್ತಾರೆ, ಗ್ರಾಹಕರೊಂದಿಗೂ ವಾಗ್ವಾದ ನಡೆಸು
ತ್ತಾರೆ ಎಂಬ ಆರೋಪವೂ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿತ್ತು.

ಈ ರಸ್ತೆಯು ಚಿಕ್ಕದಾಗಿರುವುದ ರಿಂದ ಪ್ರತಿನಿತ್ಯ ಎಸ್‌ಬಿಐ ರಸ್ತೆಯಲ್ಲಿ ಸಂಚಾರ ದಟ್ಟಣೆ ಏರ್ಪಡುತ್ತಿತ್ತು. ಇತ್ತೀಚೆಗೆ ವರ್ತಕರ ನಡುವೆ ಕಲಹ ತಾರಕಕ್ಕೇರಿದ್ದರಿಂದ ವ್ಯಾಪಾರ ನಡೆಯು ತ್ತಿದ್ದ ಜಾಗಕ್ಕೆ ತಂತಿ ಬೇಲಿ ಹಾಕಿ ವ್ಯಾಪಾರ ವಹಿವಾಟನ್ನು ನಿಷೇಧಿಸಲಾಗಿದ್ದು, ಹೊಂದಾಣಿಕೆಯಿಲ್ಲದ ವರ್ತಕರು ವ್ಯಾಪಾರದ ಜಾಗವನ್ನು ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ.

‘ಪಟ್ಟಣದಲ್ಲಿ ಹಣ್ಣು, ಹೂವು, ತರಕಾರಿ, ಸೊಪ್ಪು ಮಾರಾಟಕ್ಕೆ ಸೂಕ್ತ ಮಾರುಕಟ್ಟೆಯಿಲ್ಲ. ಎಲ್ಲೆಂದರಲ್ಲಿ ತರಕಾರಿ ಅಂಗಡಿಗಳು ತಲೆ ಎತ್ತಿದ್ದು, ರಸ್ತೆ ಬದಿಯಲ್ಲಿಯೇ ಹಲವರು ವಹಿವಾಟು ನಡೆಸುತ್ತಾರೆ. ಅನಧಿಕೃತವಾಗಿ ಅಂಗಡಿಗಳನ್ನು ಹಾಕುವುದರಿಂದ ಪಟ್ಟಣ ಪಂಚಾಯಿತಿಗೂ ಯಾವುದೇ ಆದಾಯ ಬರುವುದಿಲ್ಲ. ಪಟ್ಟಣದಲ್ಲಿ ಕೋಳಿ, ಮೀನಿನ ಮಳಿಗೆಗಳನ್ನು ನಿರ್ಮಿಸಿ ಆರು ವರ್ಷವಾದರೂ ಇದುವರೆಗೂ ಅವುಗಳಲ್ಲಿ ವಹಿವಾಟು ಪ್ರಾರಂಭ ವಾಗಿಲ್ಲ. ಮೂರು ದಶಕಗಳಿಂದಲೂ ಪಟ್ಟಣದ ಮಾರುಕಟ್ಟೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಕೂಡಲೇ ಕೋಳಿ, ಕುರಿ, ಮೀನು, ತರಕಾರಿ ಮಾರಾಟಕ್ಕೆ ಪ್ರತ್ಯೇಕ ಮಾರುಕಟ್ಟೆಗಳನ್ನು ನಿರ್ಮಿಸಬೇಕು’ ಎಂದು ಪಟ್ಟಣದ ನಿವಾಸಿ ಮಹೇಶ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT