ಚಿಕ್ಕಮಗಳೂರು: ‘ಪ್ರಜಾಪ್ರಭುತ್ವದಲ್ಲಿ ಪಂಚಾಯತ್ರಾಜ್ ವ್ಯವಸ್ಥೆ ಸದೃಢ ಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ತೊಡಗಿ ಕೊಂಡಿದೆ’ ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಕೆ.ಜೆ.ಜಾರ್ಜ್ ತಿಳಿಸಿದರು.
ಪ್ರೆಸ್ಕ್ಲಬ್ನಲ್ಲಿ ಗುರುವಾರ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು. ಗಾಂಧೀಜಿ ಕನಸು ನನಸಾಗಿಸಲು ಪಂಚಾಯತ್ ರಾಜ್ ವ್ಯವಸ್ಥೆ ಪ್ರಮುಖವಾಗಿದೆ. ಅಧಿಕಾರ ವಿಕೇಂದ್ರೀಕರಣ, ಮಹಿಳೆಯರಿಗೆ ಅವಕಾಶ ಮೊದಲಾ ದವಕ್ಕೆ ಪಕ್ಷ ಆದ್ಯತೆ ನೀಡಿದೆ’ ಎಂದರು.
‘ಪಕ್ಷ ಎಲ್ಲಿಯೂ ನಿಷ್ಕ್ರಿಯವಾಗಿಲ್ಲ. ಪ್ರತಿ ಹಳ್ಳಿಯಲ್ಲೂ ಕಾಂಗ್ರೆಸ್ಸಿಗರು ಇದ್ದಾರೆ. ಪಕ್ಷವನ್ನು ಮತ್ತಷ್ಟು ಬಲಪಡಿಸುವ ಕಾಯಕದಲ್ಲಿ ತೊಡಗಿದ್ದೇವೆ’ ಎಂದು ಉತ್ತರಿಸಿದರು.
ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಎಲ್. ಶಂಕರ್ ಮಾತನಾಡಿ, ‘ಗಾಂಧಿ ಯಾನ’ ಕರಪತ್ರಗಳನ್ನು ಮನೆಮನೆಗೆ ತಲುಪಿಸುತ್ತಿದ್ದೇವೆ. ‘ಗ್ರಾಮ ಸ್ವರಾಜ್’ಗೆ ಕಾರಣವಾದ ಅಂಶಗಳನ್ನು ತಿಳಿಸುತ್ತಿದ್ದೇವೆ’ ಎಂದು ತಿಳಿಸಿದರು.
‘ಬಲವಂತರಾಯ್ ಸಮಿತಿ, ಅಶೋಕ್ ಮೆಹ್ತಾ ಸಮಿತಿ, ಪಂಚಾಯತ್ ರಾಜ್ ವ್ಯವ್ಯಸ್ಥೆ ರೂಪಿಸಿದ್ದು, ಸಂವಿ ಧಾನದ 73ನೇ ತಿದ್ದುಪಡಿ ಅಂಶಗಳು ಇವೇ ಮೊದಲಾದ ವಿಚಾರ ಕರಪತ್ರ ದಲ್ಲವೆ. ಜನರಿಗೆ ಅರಿವು ಮೂಡಿ ಸುವುದರಲ್ಲಿ ತೊಡಗಿದ್ದೇವೆ’ ಎಂದರು.
‘ಬಿಜೆಪಿ ಪಾರಮ್ಯಕ್ಕೆ ಕಾಂಗ್ರೆಸ್ ಮಾತ್ರ ಕಾರಣವಲ್ಲ. ಜನತಾ ಪರಿವಾರ ಅನೇಕ ಹೋಳಾಗಿ, ದುರ್ಬಲವಾಗಿದ್ದು ಕಾರಣ. ಬಿಜೆಪಿ ಭಾವನಾತ್ಮಕ ರಾಜಕಾರಣದ ಮೂಲಕ ಚಿಕ್ಕಮಗಳೂರು ಸಹಿತ ಕರಾವಳಿ, ಮಲೆನಾಡು ಭಾಗದಲ್ಲಿ ಮೇಲುಗೈ ಸಾಧಿಸಿದೆ. ಕಾಂಗ್ರೆಸ್ನ ಬದುಕು ಕಟ್ಟುವ ರಾಜಕಾರಣಕ್ಕೆ ಹಿನ್ನಡೆಯಾಗಿದೆ. ಭಾವನಾತ್ಮಕ ವಿಷಯ ಶಾಶ್ವತವಾಗಿ ಇರಲ್ಲ. ಬದುಕು ಕಟ್ಟುವ ವಿಷಯ ಮುಂಚೂಣಿಗೆ ಬಂದೇಬರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡರಾದ ಡಿ.ಎಲ್.ವಿಜಯಕುಮಾರ್, ಕೆ.ಪಿ.ಅಂಶುಮಂತ್, ಸಿ.ಆರ್.ಸಗೀರ್ ಅಹಮದ್, ವೆಂಕಟೇಶ್ ನಾಯ್ಡು, ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.
‘ಪ್ರತಿ ತಾಲ್ಲೂಕಿನಲ್ಲಿ ಗೋಶಾಲೆ ತೆರೆಯಲಿ’
‘1964ರಲ್ಲಿ ಕಾಂಗ್ರೆಸ್ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿತ್ತು. ಈ ಸರ್ಕಾರ ಕಾಯ್ದೆಯಲ್ಲಿ ಬದಲಾವಣೆ ಮಾಡಿದೆ. ಸಾಧಕಬಾಧಕ ಚರ್ಚೆಗೆ ಅವಕಾಶ ನೀಡದೆ ಈಗ ರೂಪಿಸಿರುವ ಕಾಯ್ದೆಯನ್ನು ಅಂಗೀಕರಿಸಲಾಗಿದೆ. ಈಗಿನ ಕಾಯ್ದೆಯಿಂದ ರೈತರಿಗೆ, ಚರ್ಮ ಕಸುಬುದಾರರಿಗೆ ತೊಂದರೆಯಾಗುತ್ತದೆ’ ಎಂದು ಶಂಕರ್ ಪ್ರತಿಕ್ರಿಯಿಸಿದರು.
‘ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೋಮಾಳ ಗುರುತಿಸಬೇಕು, ಪ್ರತಿ ತಾಲ್ಲೂಕಿನಲ್ಲಿ ಗೋಶಾಲೆ ತೆರೆಯಬೇಕು, ದನದ ಮಾಂಸ ರಫ್ತು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.