ಕೊಪ್ಪ: ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಶನಿವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶಾಸಕ ಟಿ.ಡಿ.ರಾಜೇಗೌಡ ಅವರ ನೇತೃತ್ವದಲ್ಲಿ ರಾಷ್ಟ್ರಧ್ವಜ ಹಿಡಿದು ಬೃಹತ್ ಸ್ವಾತಂತ್ರ್ಯ ನಡಿಗೆಯು ಪಟ್ಟಣ ಕೇಂದ್ರದಿಂದ ಕುದುರೆಗುಂಡಿ ವರೆಗೆ ನಡೆಯಿತು.
ಮೇಲಿನಪೇಟೆಯಲ್ಲಿನ ಎಂ.ಎಸ್.ದ್ಯಾವೇಗೌಡ ಸ್ಮಾರಕ ದ್ವಾರದಿಂದ ಕುದುರೆಗುಂಡಿ ವರೆಗೆ ನೂರಾರು ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ನಾಸಿಕ್ ಡೋಲ್ ಹೊಡೆದು ಸಂಭ್ರಮಿಸಿದರು. ಪಟ್ಟಣದ ಬಸ್ ನಿಲ್ದಾಣದ ಬಳಿ ಮಳೆಯ ನಡುವೆಯೂ ಕಾಂಗ್ರೆಸ್ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ವಾಹನಕ್ಕೆ ಕೇಸರಿ, ಬಿಳಿ, ಹಸಿರು ಬಣ್ಣದ ಹೂವು, ಎಲೆಗಳಿಂದ ಅಲಂಕರಿಸಲಾಗಿತ್ತು.
ಶಾಸಕ ಟಿ.ಡಿ.ರಾಜೇಗೌಡ, ಕ್ಷೇತ್ರ ಕಾಂಗ್ರೆಸ್ ಉಸ್ತುವಾರಿ ಪದ್ಮಪ್ರಸಾದ್ ಜೈನ್, ಮುಖಂಡರಾದ ಎಚ್.ಶಶಿಕುಮಾರ್, ಬಾಳೆಮನೆ ನಟರಾಜ್, ಅಸಗೋಡು ನಾಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ, ಉಪಾಧ್ಯಕ್ಷೆ ಅನ್ನಪೂರ್ಣ ನರೇಶ್, ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.
ಜಾಥಾ ತೆರಳಿದ ಮಾರ್ಗ ಮಧ್ಯೆ ಬಾಳಗಡಿಯಲ್ಲಿರುವ ಜೆಡಿಎಸ್ ಕಚೇರಿ ಬಳಿ ಕಾಂಗ್ರೆಸ್ ಮುಖಂಡರು ನಡೆದು ಹೋಗುತ್ತಿದ್ದಾಗ, ಸ್ಥಳಕ್ಕೆ ಬಂದ ರಾಜ್ಯ ಜೆಡಿಎಸ್ ಘಟಕದ ಉಪಾಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಅವರು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಹಸ್ತಲಾಘವ ಮಾಡುವ ಮೂಲಕ ಸ್ವಾಗತಿಸಿದರು.
ಈ ಸಂದರ್ಭ ಕ್ಷೇತ್ರ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ, ಕಸಬಾ ಹೋಬಳಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಪಿ.ಚಿಂತನ್, ಬರ್ಕತ್ ಆಲಿ, ಜೆಡಿಎಸ್ ಮುಖಂಡರಾದ ಎನ್.ಕೆ.ಉದಯ್, ವಾಸಪ್ಪ ಕುಂಚೂರು ಪ್ರಮುಖರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.