ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್ನಿಂದಾಗಿ ಮಂಗಳವಾರ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. 55 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 10 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ನಗರದ ಉಪ್ಪಳ್ಳಿಯ 58 ವರ್ಷದ ಮಹಿಳೆ (ಪಿ– 69691) ಮೃತಪಟ್ಟವರು. ಮಹಿಳೆಗೆ ಅಧಿಕ ರಕ್ತದೊತ್ತಡ, ಮಧುಮೇಹವೂ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.
ತಾಲ್ಲೂಕುವಾರು ಚಿಕ್ಕಮಗಳೂರು– 26, ತರೀಕೆರೆ– 17, ಕಡೂರು– 7, ಶೃಂಗೇರಿ–4 ಹಾಗೂ ಮೂಡಿಗೆರೆಯ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಫಿನಾಡಿನಲ್ಲಿ ಸಕ್ರಿಯ ಪ್ರಕರಣಗಳು 344 ಇವೆ. ಈವರೆಗಿನ ಒಟ್ಟಾರೆ ಪ್ರಕರಣಗಳ ಸಂಖ್ಯೆ 758ಕ್ಕೆ ತಲುಪಿದೆ. ಜಿಲ್ಲೆಯ 248 ಕಡೆ ನಿರ್ಬಂಧಿತ ವಲಯ (ಕಂಟೈನ್ಮೆಂಟ್ ಜೋನ್) ಘೋಷಿಸಲಾಗಿದೆ. ಈವರೆಗೆ 384 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೋವಿಡ್ ಸಾವಿನ ಸಂಖ್ಯೆ 22 ಕ್ಕೆ (ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟ ಎರಡು ಪ್ರಕರಣ ಸಹಿತ) ಏರಿದೆ.
7 ಮಂದಿಗೆ ಕೋವಿಡ್
ಕಡೂರು: ತಾಲ್ಲೂಕಿನಲ್ಲಿ ಮಂಗಳವಾರ ಏಳು ಮಂದಿಗೆ ಕೋವಿಡ್ ದೃಢಪಟ್ಟಿದೆ.
ಪಟ್ಟಣದ ವೆಂಕಟೇಶ್ವರ ನಗರದ 34 ವರ್ಷದ ಮಹಿಳೆ, ಸ್ವರ್ಣಾಂಬ ಕಾಲೊನಿಯ 60 ವರ್ಷದ ಮಹಿಳೆ, ಈದ್ಗಾ ನಗರದ 65 ವರ್ಷದ ವೃದ್ಧ, ಸುಭಾಷ್ ನಗರದ 23 ವರ್ಷದ ಯುವಕ, ಸಖರಾಯಪಟ್ಟಣದ 45 ವರ್ಷದ ವ್ಯಕ್ತಿ ಮತ್ತು ಮತಿಘಟ್ಟದ 38 ವರ್ಷದ ಮಹಿಳೆ ಹಾಗೂ ಬೀರೂರಿನ 52 ವರ್ಷದ ಮಹಿಳೆಯೊಬ್ವರಿಗೆ ಸೋಂಕು ಇರುವುದು ಪತ್ತೆಯಾಗಿದೆ.