ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣ, ಇನ್ನೂ ಮರೀಚಿಕೆ

ಕೆಎಸ್‌ಸಿಎ ಲೀಗ್ ಪಂದ್ಯಗಳಿಗೆ ಪಕ್ಕದ ಜಿಲ್ಲೆ ಅವಲಂಬನೆ ಸ್ಥಿತಿ
Last Updated 27 ಏಪ್ರಿಲ್ 2022, 5:04 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲಾ ಕೇಂದ್ರದಲ್ಲಿ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಈಡೇರಿಲ್ಲ. ಕ್ರಿಕೆಟ್‌ ಅಭ್ಯಾಸ, ಟೂರ್ನಿ ಎಲ್ಲದಕ್ಕೂ ಜಿಲ್ಲಾ ಆಟದ ಮೈದಾನ, ಶತಮಾನೋತ್ಸವ ಕ್ರೀಡಾಂಗಣ ಗತಿಯಾಗಿವೆ.

ಕ್ರಿಕೆಟ್‌, ಫುಟ್ಬಾಲ್‌, ಬ್ಯಾಸ್ಕೆಟ್‌ ಬಾಲ್‌, ವಾಲಿಬಾಲ್‌, ಕಬಡ್ಡಿ ಸಹಿತ ಬಹುತೇಕ ಆಟಗಳಿಗೆ ಜಿಲ್ಲಾ ಆಟದ ಮೈದಾನವೇ ದಿಕ್ಕು. ವಾಯುವಿಹಾರ, ನಡಿಗೆ ಪಥ ಈ ಮೈದಾನದಲ್ಲಿವೆ.

ಬೆಳಿಗ್ಗೆ, ಸಂಜೆ ವಿಹಾರಕ್ಕೆ ಬಹಳಷ್ಟು ಮಂದಿ ಮೈದಾನಕ್ಕೆ ಬರುತ್ತಾರೆ. ಕ್ರಿಕೆಟ್‌ ಚಂಡು ವಿಹಾರಿಗಳಿಗೆ ತಗುಲಿದ ನಿದರ್ಶನಗಳು ಇವೆ. ಅತ್ತಿಂದಿತ್ತ ಓಡಾಟದಿಂದ ಆಟಗಾರರ ಅಭ್ಯಾಸಕ್ಕೆ ಆಗಾಗ ಅಡಚಣೆ ಮಾಮೂಲಿಯಾಗಿದೆ.

ಪಕ್ಷಗಳ ಸಮಾವೇಶ, ಬೃಹತ್‌ ಕಾರ್ಯಕ್ರಮಗಳು (ಚಿಕ್ಕಮಗಳೂರು ಹಬ್ಬ...) ಮೊದಲಾದವುಗಳಿಗೆ ಜಿಲ್ಲಾ ಆಟದ ಮೈದಾನವೇ ಆಸರೆ.

ಜಿಲ್ಲೆಯ ಕಡೂರಿನ ವೇದಾಕೃಷ್ಣಮೂರ್ತಿ ಅವರು ಭಾರತದ ಮಹಿಳಾ ಕ್ರಿಕೆಟ್‌ ತಂಡದಲ್ಲಿದ್ದಾರೆ. ನಗರದ ಶಿಶಿರಾ ಎ. ಗೌಡ ಅವರು ಕರ್ನಾಟಕ ತಂಡದಲ್ಲಿದ್ದಾರೆ. ಕಾಫಿನಾಡಿನ ಹಲವರು ಕ್ರಿಕೆಟ್‌ ಕ್ಷೇತ್ರದಲ್ಲಿ ಭರವಸೆಯ ಹೆಜ್ಜೆಗಳನ್ನು ಮೂಡಿಸಿದ್ದಾರೆ.

‘ಕ್ರಿಕೆಟ್‌ ಮೈದಾನ ನಿರ್ಮಾಣ ನಿಟ್ಟಿನಲ್ಲಿ ಹಿಂದೊಮ್ಮೆ ಜಾಗ ಗುರುತಿಸುವ ಪ್ರಯತ್ನ ನಡೆದಿತ್ತು. ಗೇಟ್‌ ವೇ ಹೋಟೆಲ್‌ ಸಮೀಪ ಜಾಗ ಪರಿಶೀಲನೆ ಮಾಡಿದ್ದರು. ನಂತರ ಕೈಬಿಟ್ಟರು’ ಎಂದು ರತ್ನಗಿರಿ ಕ್ರಿಕೆಟ್‌ ಅಕಾಡೆಮಿಯ ಕೋಚ್‌ ಕೋಟೆ ಶಂಕರ್‌ ತಿಳಿಸಿದರು.

ಕ್ರಿಕೆಟ್‌ ಕ್ರೀಡಾಂಗಣಕ್ಕಾಗಿ ಹಲವು ವರ್ಷಗಳಿಂದ ಪ್ರಯತ್ನಗಳು ಸಾಗಿವೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಲೀಗ್‌ ಪಂದ್ಯಗಳನ್ನು ಆಯೋಜನೆಗೆ ಜಿಲ್ಲೆಯಲ್ಲಿ ಸುಸಜ್ಜಿತ ಮೈದಾನ ಇಲ್ಲ. ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಇವೆ. ಲೀಗ್‌ ಪಂದ್ಯಗಳ ಆಯೋಜನೆಗೆ ಪಕ್ಕದ ಜಿಲ್ಲೆ ಅವಲಂಬಿಸಬೇಕಾದ ಸ್ಥಿತಿ ಇದೆ. ನಗರದಲ್ಲಿ ಸುಸಜ್ಜಿತ ಟರ್ಫ್‌ ಕ್ರಿಕೆಟ್‌ ಮೈದಾನ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಆಟಗಾರರು ಫೆಬ್ರುವರಿಯಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

‘ಈಗಾಗಲೇ ಹಲವು ಬಾರಿ ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮವಹಿಸುವುದಾಗಿ ಹಲವು ವರ್ಷಗಳ ಹಿಂದೆಯೇ ಹೇಳಿದ್ದರು. ಈವರೆಗೂ ಸಾಕಾರವಾಗಿಲ್ಲ. ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು’ ಎಂದು ರಾಣಾ ಸ್ಫೋರ್ಟ್ಸ್‌ ಕ್ಲಬ್‌ನ ಹರೀಶ್‌ ಒತ್ತಾಯಿಸುತ್ತಾರೆ.

‘ಜಿಲ್ಲಾ ಆಟದ ಮೈದಾನದಲ್ಲಿ ಕ್ರಿಕೆಟ್‌ ಅಭ್ಯಾಸಕ್ಕೆ ಸವಲತ್ತು ಇಲ್ಲ’
ಜಿಲ್ಲಾ ಆಟದ ಮೈದಾನದಲ್ಲಿ ಕ್ರಿಕೆಟ್‌ಗೆ ಪೂರಕವಾದ ಸವಲತ್ತುಗಳು ಇಲ್ಲ. ಮ್ಯಾಟ್‌ ಮಾತ್ರ ಇದೆ. ಟರ್ಫ್‌ ವಿಕೆಟ್‌, ಗ್ರಾಸ್‌ ಯಾವುದೂ ಇಲ್ಲ ಎಂದು ರಾಜ್ಯ ಮಹಿಳಾ ತಂಡದ ಆಟಗಾರ್ತಿ ಶಿಶಿರಾ ಎ. ಗೌಡ ತಿಳಿಸಿದರು.

‘10 ವರ್ಷಗಳ ಹಿಂದೆ ಜಿಲ್ಲಾ ಆಟದ ಮೈದಾನದಲ್ಲಿ ನನ್ನ ಕ್ರಿಕೆಟ್‌ ಯಾನ ಆರಂಭವಾಯಿತು. ಕೋಚ್ ರಾಮದಾಸ್‌ ತರಬೇತಿ ನೀಡಿದರು. ಪೋಷಕರು, ಕೋಚ್‌ ಅವರು ಮಾರ್ಗದರ್ಶನ ನೀಡಿದರು. ಬೆಂಗಳೂರಿನಲ್ಲಿ ಅಭ್ಯಾಸದಲ್ಲಿ ತೊಡಗಿದ್ದೇನೆ. ‘ಚಿಕ್ಕಮಗಳೂರಿನಲ್ಲಿ ಬಹಳಷ್ಟು ಪ್ರತಿಭೆಗಳು ಇದ್ದಾರೆ. ಕ್ರಿಕೆಟ್‌ಗಾಗಿ ಒಂದು ಕ್ರೀಡಾಂಗಣ ನಿರ್ಮಿಸಿದರೆ ಅವರಿಗೆ ಅವಕಾಶಗಳು ಸಿಗಲಿವೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

*
ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಕದ್ರಿಮಿದ್ರಿ ಭಾಗದಲ್ಲಿ ಗುರುತಿಸಿದ್ದ ಜಾಗದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವ ಉದ್ದೇಶ ಇದೆ. ಜಾಗಕ್ಕೆ ಸಂಬಂಧಿಸಿದಂತೆ ಕೆಲ ತೊಡಕುಗಳು ಇವೆ, ಅವುಗಳನ್ನು ಪರಿಹರಿಸಿ ಕ್ರಮವಹಿಸಲಾಗುವುದು.
-ಸಿ.ಟಿ.ರವಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT