ಚಿಕ್ಕಮಗಳೂರು: ‘ಕೋವಿಡ್ ಪ್ರಕರಣ ಕಡಿಮೆ ಇರುವ, ಇಲ್ಲದಿರುವ ಜಿಲ್ಲೆಗಳಲ್ಲಿ ಸಾರ್ವಜನಿಕ ಗಣೋತ್ಸವಕ್ಕೆ ಅವಕಾಶ ನೀಡಬಹುದು. ಮುಖ್ಯಮಂತ್ರಿ ಅವರೊಂದಿಗಿನ ಚರ್ಚಿಸಿದಾಗಲೂ ಅದನ್ನು ಹೇಳಿದ್ದೇನೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪತ್ರಿಕ್ರಿಯಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರಕರಣಗಳು ಹೆಚ್ಚು ಇರುವ ಹೆಚ್ಚು ಜಿಲ್ಲೆಗಳಲ್ಲಿ ನಿರ್ಬಂಧ ವಿಧಿಸುವುದು ಅನಿವಾರ್ಯ. ಗಣೇಶೋತ್ಸವ ಭಾವನೆಗೆ ತಕ್ಕಂತೆ ನಡೆಯಲು ಅವಕಾಶ ಕಲ್ಪಿಸಿ ಎಂದು ಮುಖ್ಯಮಂತ್ರಿಗೆ ವಿನಂತಿಸಿದ್ದೇನೆ’ ಎಂದು ತಿಳಿಸಿದರು.
‘ಕೊತ್ವಾಲ ರಾಮಚಂದ್ರ ತೀರಿಕೊಂಡಾಗ ನಾನಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ಅವರ ಶಿಷ್ಯ ಎಂದು ಹೆಮ್ಮೆಯಿಂದ ಹೇಳಿಕೊಂಡದ್ದು ನಾನಲ್ಲ. ‘ಆ ದಿನಗಳು’ ಪುಸಕ್ತದಲ್ಲಿ ಅವರ ಶಿಷ್ಯರು ಯಾರ್ಯಾರು ಎಂಬ ವಿವರ ಇದೆ. ಅದರಲ್ಲಿ ನನ್ನ ಹೆಸರು ಇಲ್ಲ’ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.
‘ಚಳವಳಿ ಕಾರಣಕ್ಕೆ ಜೈಲಿಗೆ ಹೋಗಿದ್ದೇನೆ. ಗೂಂಡಾಗಿರಿ, ಭ್ರಷ್ಟಾಚಾರದ ಆರೋಪ ಹೊತ್ತು ಎಂದೂ ಜೈಲಿಗೆ ಹೋಗಿಲ್ಲ’ ಎಂದು ಕುಟುಕಿದರು.
‘ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡಲು ಕಾಂಗ್ರೆಸ್ನವರಿಗೆ ನೈತಿಕ ಹಕ್ಕಿಲ್ಲ. ಕಾಂಗ್ರೆಸ್ 2014ರಲ್ಲಿ ಅಧಿಕಾರದಿಂದ ಇಳಿದಾಗ ಎಲ್ಪಿಜಿ ಸಿಲಿಂಡರ್ ಬೆಲೆ ₹ 981 ಇತ್ತು. ಕೋವಿಡ್ನಿಂದಾಗಿ ಜಗತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಅದರ ಪರಿಣಾಮವಾಗಿ ಭಾರತದಲ್ಲೂ ವಿವಿಧ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದು ತಾತ್ಕಾಲಿಕ’ ಎಂದರು.