ಚಿಕ್ಕಮಗಳೂರು: ದತ್ತ ಜಯಂತಿ ಮೊದಲ ದಿನ ಮಂಗಳವಾರ ಅನಸೂಯಾ ದೇವಿ ಪೂಜೆ, ಸಂಕೀರ್ತನೆ ಯಾತ್ರೆ ನಡೆಯಲಿದೆ.
ಮಂಗಳವಾರ ಬೆಳಿಗ್ಗೆ 8.30ಕ್ಕೆ ಬೋಳರಾಮೇಶ್ವರ ದೇಗುಲದಿಂದ ಐ.ಜಿ ರಸ್ತೆ ಮಾರ್ಗವಾಗಿ ಕಾಮಧೇನು ಗಣಪತಿ ದೇಗುಲದವರೆಗೆ ಮೆರವಣಿಗೆ ನಡೆಯಲಿದೆ. ಮಹಿಳೆಯರು ಪಾಲ್ಗೊಳ್ಳುವರು.
ಮೆರವಣಿಗೆ ನಂತರ ಗಿರಿಗೆ ತೆರಳಿ ಪಾದುಕೆ ದರ್ಶನ ಮಾಡುವರು. ಗಿರಿಯಲ್ಲಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುವರು. 7ರಂದು ಶೋಭಾಯಾತ್ರೆ ಹಾಗೂ 8ರಂದು ದತ್ತ ಜಯಂತಿ ಜರುಗಲಿದೆ.
ಅಲಂಕಾರ: ದತ್ತ ಜಯಂತಿ ನಿಮಿತ್ತ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಕೇಸರಿ ಹಾರ ಕಟ್ಟಿ ಅಲಂಕರಿಸಲಾಗಿದೆ. ಹನುಮಂತಪ್ಪ ವೃತ್ತ, ಎಂ.ಜಿ ರಸ್ತೆ, ಬಸವನಹಳ್ಳಿ ರಸ್ತೆ, ಬೋಳರಾಮೇಶ್ವರ ದೇವಾಲಯ, ಆಜಾದ್ ಪಾರ್ಕ್ ವೃತ್ತ ಸಹಿತ ವಿವಿಧ ಕೇಸರಿ ಹಾರ ಕಟ್ಟಲಾಗಿದೆ. ಕೆಲವೆಡೆ ಫ್ಲಕ್ಸ್ ಅಳವಡಿಸಲಾಗಿದೆ.
ಬಾಕ್ಸ್ಗಳು
ಪಥ ಸಂಚಲನ; ಕಟ್ಟೆಚ್ಚರ
ದತ್ತ ಜಯಂತಿ ನಿಮಿತ್ತ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪೊಲೀಸ್ ಪಥಸಂಚಲನ (ರೂಟ್ ಮಾರ್ಚ್) ನಡೆಯಿತು.
ಬಸವನಹಳ್ಳಿ ಮುಖ್ಯ ರಸ್ತೆ, ಎಂ.ಜಿ ರಸ್ತೆ ಸಹಿತ ವಿವಿಧ ರಸ್ತೆಗಳಲ್ಲಿ ಪೊಲೀಸರು ಸಾಲಾಗಿ ಸಾಗಿದರು. ಆಯಕಟ್ಟಿನ ಸ್ಥಳಗಳು, ಪ್ರಾರ್ಥನಾ ಮಂದಿರಗಳು ಸಹಿತ ವಿವಿಧೆಡೆಗಳಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಕಣ್ಗಾವಲಿಗೆ ವಿವಿಧೆಡೆ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ತಪಾಸಣೆ ನಿಟ್ಟಿನಲ್ಲಿ ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ.