ಆದರೆ, ನದಿಯ ಮೆಟ್ಟಿಲುಗಳನ್ನು ದಾಟಿ ಬಂದರೆ ಕಿರಿದಾದ ಕೊಳಕು ಗಲ್ಲಿಗಳು, ಗೂಡುಗಳನ್ನು ಹೋಲುವ ಮನೆಗಳು, ಅಲ್ಲಿಯೇ ರಸ್ತೆ ಬದಿ ವ್ಯಾಪಾರ ಹಾಗೂ ಉಪಾಹಾರ ಕೇಂದ್ರಗಳು... ಕಿರಿಕಿರಿ ಎನಿಸುತ್ತವೆ. ವಿಶೇಷವೆಂದರೆ ಎಲ್ಲಾ ಊರುಗಳ ರಸ್ತೆ ಬದಿ ವ್ಯಾಪಾರಿಗಳಿಗೆ ಸರ್ವೋಚ್ಚ ನ್ಯಾಯಾಲಯದ ಕೃಪೆಯ ಆದೇಶವಿದೆ. ನ್ಯಾಯಾಲಯವು ತನ್ನ ಈ ನಿರ್ಣಯದ ಬಗ್ಗೆ ಮರು ಪರಿಶೀಲಿಸಲು ಇದು ಸಕಾಲವಾಗಿದೆ. ಕಾಶಿಯ ಜನರಿಗೆ ಸ್ವಚ್ಛತೆಯ ಬಗ್ಗೆ ಪೂರ್ಣ ತಿಳಿವಳಿಕೆ ಹಾಗೂ ಬದ್ಧತೆ ಇಲ್ಲ. ರಸ್ತೆಯ ಬದಿಯಲ್ಲಿ ತ್ಯಾಜ್ಯ ಬಿಸಾಡುತ್ತಾರೆ. ಕವಳ ಉಗಿಯುತ್ತಾರೆ. ಸರ್ಕಾರದ ಪ್ರಯತ್ನದ ಜೊತೆ ಜನರೂ ಕೈಜೋಡಿಸಬೇಕು. ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಇದಕ್ಕಾಗಿ ಸ್ವಯಂ ಸೇವಾ ಸಂಘಗಳು, ಶಾಲಾ– ಕಾಲೇಜುಗಳು, ಮಠ–ಮಂದಿರಗಳು ಪ್ರಯತ್ನಿಸಬೇಕಾದುದು ಕಾಲದ ಕರೆಯಾಗಿದೆ.