ಆಸ್ಪತ್ರೆಯ ಒಳರೋಗಿ ವಿಭಾಗದ ಸುತ್ತಮುತ್ತಲಿನ ಮರಗಳ ಟೊಂಗೆಗಳನ್ನು ಕಡಿಯಲಾಗಿದೆ. ಮರಗಳು ಬೋಳಾಗಿವೆ. ಆಸ್ಪತ್ರೆ ಆವರಣದ ನೆರಳು ಮರೆಯಾಗಿದೆ. ‘ಆಸ್ಪತ್ರೆ ಪ್ರವೇಶ ದ್ವಾರದಲ್ಲಿದ್ದ ಅರಳಿ ಮರದ ಟೊಂಗೆಗಳನ್ನು ಕಡಿದಿದ್ದರು. ಈಗ ಆಸ್ಪತ್ರೆ ಆವರಣದಲ್ಲಿನ ಹಲವು ಮರಗಳ ಕೊಂಬೆಗಳನ್ನು ಕಡಿದಿದ್ದಾರೆ. ಮರಗಳು ನೆರಳು, ಆಮ್ಲಜನಕ ನೀಡುತ್ತಿದ್ದವು. ‘ಅಂಗಾಂಗ’ ಕತ್ತರಿಸಿ ಹಸಿರು ಹೊದಿಕೆ ಹಾಳುಗೆಡವಿದ್ದಾರೆ’ ಪರಿಸರಾಸಕ್ತರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. ‘ಒಳರೋಗಿ ವಿಭಾಗದ ಸುತ್ತಲಿನ ಎಂಟು ಮರಗಳ ರೆಂಬೆಗಳನ್ನು ಮಾತ್ರ ಕಡಿಯಲಾಗಿದೆ. ಮರಗಳ ಮರೆಯಲ್ಲಿ ಅನೈತಿಕ ಚಟುವಟಿಕೆಗಳ ನಡೆಯುತ್ತಿದ್ದವು. ರೋಗಿಗಳ ಸುರಕ್ಷತೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮೋಹನಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.