ನರಸಿಂಹರಾಜಪುರ: ವಿದ್ಯಾರ್ಥಿಗಳ ಕಲಿಕೆಗೆ ಕಲಿಕಾ ಹಬ್ಬ ಪೂರಕವಾಗಲಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ತಿಳಿಸಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಸೋಮವಾರ ನಡೆದ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳಲ್ಲಿ ಉತ್ಸಾಹ, ಉಲ್ಲಾಸ ಮೂಡುತ್ತದೆ. ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಲಿದೆ. ಕಲಿಕಾ ಹಬ್ಬದಲ್ಲಿ ಮಕ್ಕಳಿಗೆ ಕಲಿಸುವ ವಿಷಯಗಳು ವಿಶೇಷವಾಗಿವೆ. ಇದರಿಂದ ಮಕ್ಕಳ ಮುಂದಿನ ಭವಿಷ್ಯಕ್ಕೆ ನೆರವಾಗಲಿದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ ಮಾತನಾಡಿ, ಸರ್ಕಾರವು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉತ್ತಮ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಈ ಯೋಜನೆಗಳು ಫಲಕಾರಿ ಆಗಬೇಕಾದರೆ ಅದಕ್ಕೆ ನುರಿತ ಸಿಬ್ಬಂದಿ ನೀಡಬೇಕು. ಶಿಕ್ಷಣದ ಅಭಿವೃದ್ಧಿಗೆ ತರುವ ಹೊಸ ಹೊಸ ಯೋಜನೆಗಳಿಂದ ಶಿಕ್ಷಕರಿಗೆ ಹೊರೆಯಾಗುತ್ತಿದೆ. ಹಾಗಾಗಿ ಹೊಸ ಯೋಜನೆ ಜಾರಿಗೆ ತಂದ ತಕ್ಷಣ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಂಡು ಅವರಿಗೆ ತರಬೇತಿ ನೀಡಿದರೆ ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದರು.
ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಜಿ.ಪುರುಷೋತ್ತಮ, ಸದಸ್ಯರಾದ ಕೆ.ಎ.ಅಬೂಬಕರ್, ಸಲೀಂ, ದೇವೆಂದ್ರ, ಬಿಆರ್ ಸಿ ರಂಗಪ್ಪ, ಹನುಮಂತಪ್ಪ, ಉಪಪ್ರಾಂಶುಪಾಲ ವೆಂಕಟೇಶ್, ವಾಗ್ದೇವಿ, ಶಾಂತಕುಮಾರಿ ಇದ್ದರು.