ಮೂಡಿಗೆರೆ: ತಾಲ್ಲೂಕಿನ ಎಸ್ಟೇಟ್ ಕುಂದೂರಿನಲ್ಲಿ ತೋಟದಲ್ಲಿ ಭಾನುವಾರ ಶೋಭಾ (45) ಹುಲ್ಲು ಕೊಯ್ಯುವಾಗ ಕಾಡಾನೆಯೊಂದು ತಿವಿದು, ತುಳಿದು ಸಾಯಿಸಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಉದ್ರಿಕ್ತರು ಘೇರಾವ್ ಹಾಕಿಆಕ್ರೋಶ ವ್ಯಕ್ತಪಡಿಸಿದರು.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಲಾಠಿ ಹಿಡಿದು ಉದ್ರಿಕ್ತರನ್ನು ತಡೆದು, ಶಾಸಕ ಎಂ.ಪಿ.ಕುಮಾರಸ್ವಾಮಿ ಅವರನ್ನು ಅರಣ್ಯ ಇಲಾಖೆಯ ಜೀಪು ಹತ್ತಿಸಿದರು. ಕುಮಾರ ಸ್ವಾಮಿ ಅವರ ಅಂಗಿ ಹರಿಯಿತು. ಉದ್ರಿಕ್ತ ಜನರು ಜೀಪನ್ನು ಹಿಂಬಾಲಿಸಿ ಓಡಿದರು. ಉದ್ರಿಕ್ತರ ಗುಂಪು ಜೀಪಿನ ಮೇಲೆ ಕಲ್ಲು ತೂರಾಟ ನಡೆಸಿದರು. ಜೀಪು ಜಖಂಗೊಂಡಿತು.
ಪೊಲೀಸರು ಉದ್ರಿಕ್ತರನ್ನು ಚದುರಿಸಲು ಹರಸಾಹಸ ಪಟ್ಟರು. ಶಾಸಕರು ಜೀಪಿನಿಂದ ಇಳಿಯಬೇಕು ಎಂದು ಪಟ್ಟುಹಿಡಿದರು. ಉದ್ರಿಕರು ಶಾಸಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಸಂಚು ರೂಪಿಸಿ ಹಲ್ಲೆ:
‘ಉದ್ದೇಶ ಪೂರ್ವಕವಾಗಿ ನನ್ನ ಮೇಲೆ ಹಲ್ಲೆ ಮಾಡಿಸಲಾಗಿದೆ. ಇದರಲ್ಲಿ ಪೊಲೀಸರ ವೈಫಲ್ಯ ಇದೆ. ಸ್ಥಳದಲ್ಲಿ 10 ಮಂದಿ ಪೊಲೀಸರು ಮಾತ್ರ ಇದ್ದರು’ ಎಂದು ಕುಮಾರಸ್ವಾಮಿ ದೂರಿದ್ದಾರೆ.
ಅಂಗಿ ಹರಿದ ಸ್ಥಿತಿಯಲ್ಲೇ ವಿಡಿಯೋ ಮಾಡಿ ಹೇಳಿಕೆ ನೀಡಿರುವ ಅವರು, ‘ಪ್ರತಿಭಟನಾ ಸ್ಥಳದಲ್ಲೇ ಇರಲು ಮುಂದಾಗಿದ್ದೆ. ಆದರೆ, ಪೊಲೀಸರು ದಾರಿ ತಪ್ಪಿಸಿ ಹೊರಕ್ಕೆ ಕಳಿಸಿದರು. ಇದು ಪೊಲೀಸರು ಮಾಡಿದ ತಪ್ಪು’ ಎಂದು ಅವರು ಹೇಳಿದ್ದಾರೆ.