ಮೂಡಿಗೆರೆ (ಚಿಕ್ಕಮಗಳೂರು): ತಾಲ್ಲೂಕಿನ ಹುಲ್ಲೆಮನೆ ಕುಂದೂರು ಭಾಗದಲ್ಲಿ ಉಪಟಳ ಮಾಡುತ್ತಿವೆ ಎಂದು ಮೂರು ಕಾಡಾನೆಗಳ ಸೆರೆಗೆ ಸರ್ಕಾರ ಆದೇಶ ನೀಡಿದ್ದು, ಸೋಮವಾರ ಬೆಳಿಗ್ಗೆಯಿಂದ ಕಾರ್ಯಾಚರಣೆ ಆರಂಭವಾಗಿದೆ. ಒಂದು ಆನೆಯನ್ನು ಮಧ್ಯಾಹ್ನ ಸೆರೆ ಹಿಡಿಯಲಾಗಿದೆ.
ಮತ್ತಿಗೂಡು ಶಿಬಿರದಿಂದ ದಸರಾ ಆನೆಗಳಾದ ಅಭಿಮನ್ಯು, ಭೀಮ, ಮಹೇಂದ್ರ ಹಾಗೂ ದುಬಾರೆ ಶಿಬಿರದಿಂದ ಕೃಷ್ಣಾ, ಪ್ರಶಾಂತ್, ಹರ್ಷ ಈ ಆರು ಆನೆಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.
ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಬೆಳಿಗ್ಗೆಯಿಂದಲೇ ಕಾಡಾನೆ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಕೆಂಜಿಗೆ, ಕುಂಡ್ರ ಅರಣ್ಯ ಪ್ರದೇಶದಲ್ಲಿ ಕಾಡಾನೆಯ ಓಡಾಟ ಪತ್ತೆಹಚ್ಚಿ ಕಾರ್ಯಚರಣೆ ಆರಂಭಿಸಿದರು.
ಎರಡು ಸಾಕಾನೆಯ ಸುಪರ್ದಿಯಲ್ಲಿ ಸಕ್ರೇಬೈಲ್ ಶಿಬಿರಕ್ಕೆ ಲಾರಿಯಲ್ಲಿ ಕಾಡಾನೆಯನ್ನು ಸಾಗಿಸಲಾಯಿತು.
‘20 ವರ್ಷದ ಒಂದು ಕಾಡಾನೆ ಸೆರೆ ಸಿಕ್ಕಿದೆ. ಇನ್ನು ಎರಡು ಆನೆಗಳನ್ನು ಹಿಡಿಯಬೇಕಿದೆ. ಕಾರ್ಯಾಚರಣೆ ಮುಂದುವರಿದಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಇ.ಕ್ರಾಂತಿ ತಿಳಿಸಿದರು.