ಚಿಕ್ಕಮಗಳೂರು: ತಾಲ್ಲೂಕಿನ ಹಾಂದಿ, ಯಲಗುಡಿಗೆ, ಸೂರಪನಹಳ್ಳಿ ಭಾಗದಲ್ಲಿ ಆನೆಗಳು ಕಾಣಿಸಿಕೊಂಡಿವೆ. ಈ ಭಾಗದ ಜನರಲ್ಲಿ ಆತಂಕಕ್ಕೆ ಎಡೆಮಾಡಿದೆ.
ಕಾಫಿ ತೋಟ, ಹೊಲ, ಗದ್ದೆಗಳಲ್ಲಿ ಓಡಾಡಿವೆ. ಅರಣ್ಯ ಸಿಬ್ಬಂದಿ ಆನೆಗಳನ್ನು ಓಡಿಸುವ ನಿಟ್ಟಿನಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
‘ಒಂಬತ್ತು ಆನೆಗಳು ಕಾಣಿಸಿಕೊಂಡಿವೆ. ಗುಂಪಿನಲ್ಲಿ ಒಂದು ಮರಿಯೂ ಇದೆ. ರೆಡಿಯೋ ಕಾಲರ್ ಅಳವಡಿಸಿರುವ ಒಂದು ಆನೆಯು ಗುಂಪಿನಲ್ಲಿ ಇದೆ. ಟ್ರ್ಯಾಕ್ ಮಾಡಿ ಗಂಟೆಗೊಮ್ಮೆ ಆನೆ ಇರುವ ಪ್ರದೇಶ ಟ್ರ್ಯಾಕ್ ಮಾಡಿ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದೇವೆ. ಹೊಲ, ತೋಟ, ಇತರೆಡೆಗಳಿಗೆ ಓಡಾಡದಂತೆ ಗ್ರಾಮಸ್ಥರಿಗೆ ತಿಳಿಸಿದ್ದೇವೆ’ ಎಂದು ಅರಣ್ಯಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಮನೆಯಿಂದ ಸುಮಾರು 500 ಮೀಟರ್ ಅಂತರದಲ್ಲಿ ಸಂಜೆ ಮೂರು ಆನೆಗಳು ಹಾದು ಹೋಗಿದ್ದನ್ನು ನೋಡಿದೆ. ಎರಡು ದಿನಗಳಿಂದ ಮನೆಯಿಂದ ಹೊರಗೆ ಹೋಗಲು ಭಯವಾಗಿದೆ’ ಎಂದು ಅಶೋಕ್ ಸೂರಪ್ಪನಹಳ್ಳಿ ತಿಳಿಸಿದರು.
ಸಿಬ್ಬಂದಿ ಆನೆಗಳ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ. ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಓಡಿಸುತ್ತೇವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಇ.ಕ್ರಾಂತಿ ತಿಳಿಸಿದರು.