ಅಜ್ಜಂಪುರ: ಪಟ್ಟಣದ ಕೈಲಾಸಂ ಕಲಾಕ್ಷೇತ್ರದಲ್ಲಿ ವಿಶ್ವ ಹಿಂದೂ ಪರಿಷತ್ತು, ಬಜರಂಗದಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ‘ಹಿಂದೂ ಮಹಾಗಣಪತಿ’ ವಿಸರ್ಜನೆ ಶಾಂತಿಯುತವಾಗಿ ಭಾನುವಾರ ನೆರವೇರಿತು.
ಗಣಪತಿ ಮೂರ್ತಿಯನ್ನು ಮೆರವಣಿಗೆಯಲ್ಲಿ ನೆಹರೂ ವೃತ್ತ, ಸಿದ್ದರಾಮೇಶ್ವರ ವೃತ್ತ, ಬಸ್ ನಿಲ್ದಾಣ, ಗಾಂಧಿ ವೃತ್ತ ಮೂಲಕ ಪರ್ವತ ರಾಯನ ಕೆರೆಗೆ ಕೊಂಡೊಯ್ಯಲಾಯಿತು.
ಉತ್ಸವಕ್ಕೆ ವೀರಗಾಸೆ, ಡೊಳ್ಳು, ಮಂಗಳವಾದ್ಯಗಳು ಪಾಲ್ಗೊಂಡು ಕಳೆ ತುಂಬಿದ್ದವು. ‘ಡಿಜೆ’ಗೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಬಜರಂಗಿ ಬಾವುಟ ಹಿಡಿದು ಕುಣಿದರು. ಪಟಾಕಿ ಸಿಡಿಸಿ ಖುಷಿ ಪಟ್ಟರು. ಚಪ್ಪಾಳೆ ತಟ್ಟಿ, ಜೈಕಾರ ಹಾಕಿ ಸಂತಸ ಪಟ್ಟರು.
ಶಾಸಕ ಡಿ.ಎಸ್. ಸುರೇಶ್, ಶಂಬೈನೂರು ಆನಂದಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಗರಗದಹಳ್ಳಿ ಪ್ರತಾಪ್ ಬೇಟಿ ನೀಡಿ, ಗಣಪತಿ ಮೂರ್ತಿಗೆ ಪೂಜೆ ಸಲ್ಲಿಸಿದರು.
ಗಣಪತಿ ಸೇವಾ ಸಮಿತಿಯ ಸಂತೋಷ್ ಮೊಹರೆ, ಅತ್ತತ್ತಿ ಮಧುಸೂದನ್, ಎ.ಟಿ.ಶ್ರೀನಿವಾಸ್, ಗಿರೀಶ್ ಚೌವ್ಹಾಣ್, ಶಿವಪ್ರಸಾದ್, ಕೃಷ್ಣಪ್ಪ, ಗುರುಮೂರ್ತಿ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು.
ಅಂಗಡಿಯವರು ಸ್ವಯಂ ಪ್ರೇರಣೆಯಿಂದ ಬಾಗಿಲು ಮುಚ್ಚಿದ್ದರು. ಡಿವೈಎಸ್ಪಿ ನಾಗರಾಜು, ಪೊಲೀಸ್ ಇನ್ಸ್ಪೆಕ್ಟರ್ ಲಿಂಗರಾಜು, ಪಿಎಸ್ಐ ಬಸವರಾಜು, ಮಹಾಂತೇಶ್ ನೇತೃತ್ವ ದಲ್ಲಿ 150ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್ನಲ್ಲಿ ಪಾಲ್ಗೊಂಡಿದ್ದರು.