ಅಜ್ಜಂಪುರ: ‘ ಗ್ರಾಮೀಣ ಜನರ ಆರೋಗ್ಯ ಸುಧಾರಿಸಲು ಮತ್ತು ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಪುನರುಜ್ಜೀವನ ಗೊಳಿಸುವ ದಿಸೆಯಲ್ಲಿ ಆರಂಭಿಸಿರುವ ಗ್ರಾಮೀಣ ಕ್ರೀಡಾಕೂಟದ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು’ ಎಂದು ಶಾಸಕ ಡಿ.ಎಸ್. ಸುರೇಶ್ ಮನವಿ ಮಾಡಿದರು.
ತಾಲ್ಲೂಕಿನ ಬುಕ್ಕಾಂಬುಧಿಯಲ್ಲಿ ನಡೆದ ‘ತಾಲ್ಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ’ ಉದ್ಘಾಟಿಸಿ, ಅವರು ಮಾತನಾಡಿದರು.
ಕ್ರೀಡಾಕೂಟದಲ್ಲಿ ಕ್ರೀಡಾ ತಂಡಗಳು ಕಡಿಮೆ ಸಂಖ್ಯೆಯಲ್ಲಿ ಪಾಲ್ಗೂಂಡಿವೆ. ಇದಕ್ಕೆ ಮಾಹಿತಿ ಮತ್ತು ಪ್ರಚಾರದ ಕೊರತೆ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಗಮನ ಹರಿಸಬೇಕು ಎಂದು ಸೂಚಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವರಲಕ್ಷ್ಮೀ, ಸೋಲು-ಗೆಲುವು ಮುಖ್ಯವಲ್ಲ. ಪಾಲ್ಗೂಳ್ಳುವಿಕೆ ಮುಖ್ಯ. ಕ್ರೀಡೆಯಲ್ಲಿ ಸ್ಪೂರ್ತಿ ತೋರಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂಗಪ್ಪ, ಬುಕ್ಕಾರಾಯ ಕ್ರೀಡಾಂಗಣದ ಒತ್ತುವರಿ ತೆರವುಗೊಳಿಸಬೇಕು. ಕ್ರೀಡಾಂಗಣವನ್ನು ಅಭಿವೃದ್ಧಿಗೊಳಿಸ ಬೇಕು. ಕ್ರೀಡಾಂಗಣ ನಿರ್ವಹಣೆಯನ್ನು ಸ್ಥಳೀಯ ಪಂಚಾಯಿತಿ ನಿರ್ವಹಿಸಬೇಕು. ಆ ಮೂಲಕ ಕ್ರೀಡಾಚಟುವಟಿಕೆಗೆ ಸೂಕ್ತ ಸ್ಥಳಾವಕಾಶ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್ ಅತ್ರಿ, ಪಂಚಾಯಿತಿ ಉಪಾಧ್ಯಕ್ಷೆ ಮೀನಾಕ್ಷಿ, ಮುಖಂಡರಾದ ಶಂಭೈನೂರು ಆನಂದಪ್ಪ, ಶಂಕರಲಿಂಗಪ್ಪ, ಪ್ರಕಾಶ್, ಗಿರೀಶ್ ಚೌವ್ಹಾಣ್ ಅವು ಮಾತನಾಡಿದರು.
ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ನವೀನ್, ಮಲ್ಲಿಕಾರ್ಜುನ್, ತಾಲ್ಲೂಕು ದೈಹಿಕ ಪರಿವೀಕ್ಷಕ ಪ್ರಕಾಶ್, ಯುವಜನ ಮತ್ತು ಕ್ರೀಡಾಧಿಕಾರಿ ಜಗದೀಶ್ ಮತ್ತಿತರರು ಇದ್ದರು.