‘ಶುಂಠಿ ಬೆಳೆಗೆ ಭತ್ತದ ಗದ್ದೆಗಳೇ ಸೂಕ್ತ. ಆದರೆ ಮಳೆ ಹೆಚ್ಚಾದರೆ ಭತ್ತದ ಗದ್ದೆಯಲ್ಲಿ ಬೆಳೆದ ಶುಂಠಿ ಎಷ್ಟೇ ಉಪಚರಿಸಿದರೂ ಕೊಳೆ ರೋಗಕ್ಕೆ ತುತ್ತಾಗದಿರದು. ಅದೇ ಕಾಫಿ ಗಿಡಗಳ ನಡುವೆ ಶುಂಠಿ ಬೆಳೆದರೆ ಎಷ್ಟೇ ಮಳೆ ಸುರಿದರೂ ಕೊಳೆ ರೋಗ ಮರೀಚಿಕೆ. ಆದ್ದರಿಂದಲೇ ಕಾಫಿ ತೋಟದಲ್ಲಿ ಶುಂಠಿ ಬೆಳೆಯಬೇಕು ಎಂಬ ನಿರ್ಧಾರವನ್ನು ಮಾಡಿಕೊಂಡು, ಮೊದಲ ಹಂತದಲ್ಲಿ ಸುಮಾರು ಮೂರು ಎಕರೆ ಕಾಫಿ ತೋಟದಲ್ಲಿ ಮೂರು ಮೂಟೆಯಷ್ಟು ಶುಂಠಿಯನ್ನು ನಾಟಿ ಮಾಡಿದೆವು. ಬೀಜೋಪಚಾರ, ನಾಟಿ ಮಾಡುವ ಖರ್ಚನ್ನು ಹೊರತು ಪಡಿಸಿದರೆ ಯಾವುದೇ ವಿಶೇಷ ವೆಚ್ಚಗಳು ಬೀಳಲಿಲ್ಲ. ಮೂರು ಮೂಟೆ ನಾಟಿ ಮಾಡಿದ್ದ ಶುಂಠಿಯಿಂದ 23 ಮೂಟೆ ಶುಂಠಿಯ ಬೆಳೆ ತೆಗೆದೆವು. ಮೂಟೆಯೊಂದಕ್ಕೆ ₹2,100 ರಂತೆ ಮಾರಾಟ ಮಾಡಿದೆವು. ಒಂದು ವರ್ಷದ ಅಂತರದ ಬಳಿಕ ಇದೀಗ ಐದು ಮೂಟೆಯಷ್ಟು ಶುಂಠಿ ನಾಟಿ ಮಾಡಿದ್ದೇವೆ’ ಎನ್ನುತ್ತಾರೆ ರೈತ ಗಣೇಶ್.