ಚಿಕ್ಕಮಗಳೂರು: ‘ಎಚ್.ಡಿ.ಕುಮಾರಸ್ವಾಮಿ ಗಂಭೀರ ರಾಜಕಾರಣಿ ಅಲ್ಲ, ಅವರು ಕೀಳುಮಟ್ಟದ ಪದಗಳನ್ನು ಬಳಸುತ್ತಾರೆ’ ಆರೋಗ್ಯ ಸಚಿವ ಶ್ರೀರಾಮುಲು ಟೀಕಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕುಮಾರಸ್ವಾಮಿ ಅವರನ್ನು ವೈಯುಕ್ತಿಕವಾಗಿ ನಾನು ಯಾವತ್ತೂ ಟೀಕಿಸಿಲ್ಲ. ಮನೆಹಾಳು ಕೆಲಸ ಮಾಡಿದವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಮಾರ್ಮಿಕವಾಗಿ ನುಡಿದರು.
‘ಅಧಿಕಾರ ಕಳೆದುಕೊಂಡು ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಹತಾಶರಾಗಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಅಧಿಕಾರದಲ್ಲಿದ್ದಾಗ ಆರ್ಥಿಕ ದಿವಾಳಿ ಮಾಡಿದ್ದಾರೆ. ಸಂಪನ್ಮೂಲ ಸರಿಪಡಿಸಿಕೊಂಡು ಉತ್ತಮ ಬಜೆಟ್ ನೀಡುವ ಪ್ರಯತ್ನದಲ್ಲಿ ಮುಖ್ಯಮಂತ್ರಿ ಯುಡಿಯೂರಪ್ಪ ತೊಡಗಿದ್ದಾರೆ’ ಎಂದರು.
‘ರಾಜ್ಯದಲ್ಲಿ 97 ಮಂದಿ ರಕ್ತ ಮಾದರಿ ಸಂಗ್ರಹಿಸಿದ್ದು, ಈ ಪೈಕಿ 68 ಮಂದಿಯ ರಕ್ತಪರೀಕ್ಷೆ ವರದಿ ಬಂದಿದೆ. ಕೊರೊನಾ ವೈರಸ್ ಕಂಡುಬಂದಿಲ್ಲ’ ಎಂದು ತಿಳಿಸಿದರು.
‘ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತೆ ವಹಿಸಲಾಗಿದೆ. ಕೇರಳದ ವಾಹನಗಳ ತಪಾಸಣೆ, ವಿಮಾನ ನಿಲ್ದಾಣ, ಬಂದರುಗಳಲ್ಲಿ ರಕ್ತ ತಪಾಸಣೆ, ರಾಜ್ಯದಲ್ಲೇ ರಕ್ತ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಈ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಎಲ್ಇಡಿ ಪರದೆ ವಾಹನಕ್ಕೆ ಚಾಲನೆ ನೀಡಲಾಗಿದ್ದು, ಸಂಚಾರ ಶುರುವಾಗಿದೆ’ ಎಂದರು.