ಚಿಕ್ಕಮಗಳೂರು: ನಿಸ್ವಾರ್ಥ ಸೇವೆ, ದಾಸೋಹಕ್ಕೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಉತ್ತಮ ನಿದರ್ಶನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ ದಲ್ಲಿ ಅವರು ಮಾತನಾಡಿದರು.
‘ಹೇಮರೆಡ್ಡಿ ಮಲ್ಲಮ್ಮ ಸಾಮಾನ್ಯ ವರ್ಗದ ಕುಟುಂಬದಲ್ಲಿ ಜನಿಸಿ ದರು. ಬಾಲ್ಯದಿಂದಲೂ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯನ್ನು ಆರಾಧಿಸುತ್ತಿದ್ದರು. ಮಲ್ಲಿಕಾರ್ಜುನನ ಅನುಗ್ರಹದಿಂದ ಆದರ್ಶ ಶರಣೆಯಾಗಿ ರೂಪುಗೊಂಡರು. ಜೀವನದ ಕಡೆಯಲ್ಲಿ ದೇವರನ್ನೆ ಸಾಕ್ಷಾತ್ಕರಿಸಿಕೊಂಡರು. ಅವರು ಆಧ್ಯಾತ್ಮಿಕ ಕ್ಷೇತ್ರದ ಧ್ರುವತಾರೆ’ ಎಂದರು.
‘ಭರಮರೆಡ್ಡಿ ಅವರೊಂದಿಗೆ ಹೇಮರೆಡ್ಡಿ ಮಲ್ಲಮ್ಮ ಅವರ ವಿವಾಹವಾಗಿತ್ತು. ಭರಮರೆಡ್ಡಿಯನ್ನು ಜನರು ಹುಚ್ಚನಂತೆ ಪರಿಭಾವಿಸುತ್ತಿದ್ದರು. ಭರಮರೆಡ್ಡಿಯಲ್ಲಿನ ಮುಗ್ಧತೆ, ಸಾಧು ಸ್ವಭಾವವನ್ನು ಕಂಡು ಮಲ್ಲಮ್ಮ ಸಮಾಧಾನಗೊಂಡಿದ್ದರು. ಪತಿಯನ್ನು ದೇವರಂತೆ ಉಪಚರಿಸಿದರು’ ಎಂದರು.
‘ಹೇಮರೆಡ್ಡಿ ಮಲ್ಲಮ್ಮ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದರು. ಕರುಣಾ ಮಯಿ ಹಾಗೂ ದಾಸೋಹಿಯಾಗಿದ್ದರು. ಪರಸ್ಪರ ನಂಬಿಕೆ, ವಿಶ್ವಾಸ, ಕ್ಷಮಿಸುವ ಗುಣ ಸಕಲ ಜೀವರಾಶಿಗಳಿಗೂ ಒಳಿತನ್ನು ಬಯಸಬೇಕು ಎನ್ನುವ ಮನೋಭಾವನೆ ಜೀವನ ಸಾಗಿಸಿದರು. 500 ವರ್ಷ ಕಳೆದರೂ ಮಲ್ಲಮ್ಮ ಜನರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ರೆಡ್ಡಿ ಕುಲದವರು ಮಲ್ಲಮ್ಮನನ್ನು ಇಂದಿಗೂ ಮಹಾತಾಯಿಯಂತೆ ಪೂಜಿಸುತ್ತಾರೆ’ ಎಂದರು.
‘ಮಲ್ಲಮ್ಮನ ಮೈದುನನಾದ ವೇಮನ ದುಶ್ಚಟಗಳಿಗೆ ಬಲಿಯಾಗಿದ್ದನು. ಆತನಿಗೆ ಮಲ್ಲಮ್ಮ ಮನುಷ್ಯನ ಬದುಕಿನ ಸಾರ್ಥಕತೆಯ ಅರಿವಾಗುವಂತೆ ಮನ ಪರಿವರ್ತನೆ ಮಾಡಿದಳು. ವೇಮನ ಆಧ್ಯಾತ್ಮಿಕ ದಾರಿಯಲ್ಲಿ ಸಾಧನೆಗೈದು, ಮಹಾಯೋಗಿಯಾದನು. ಆಂಧ್ರ ಪ್ರದೇಶದಲ್ಲಿ ಪೂಜನೀಯ ಸ್ಥಾನ ಪಡೆದನು’ ಎಂದರು.
‘ಮಲ್ಲಮ್ಮ ಹಲವಾರು ಪವಾಡ ಗಳನ್ನು ನಡೆಸಿರುವ ಬಗ್ಗೆ ಪುರಣಾದಲ್ಲಿ ಉಲ್ಲೇಖ ಇದೆ. ಸಂತ ಶಿಶುನಾಳ ಷರೀಫರು ಹೇಮರೆಡ್ಡಿ ಮಲ್ಲಮ್ಮನ ಕುರಿತು ಹಲವಾರು ಗೀತೆಗಳನ್ನು ರಚಿಸಿದ್ದಾರೆ. ಮಲ್ಲಮ್ಮನ ಜೀವನದ ತತ್ವ, ಚಿಂತನೆಗಳು ಎಲ್ಲರಿಗೂ ಆದರ್ಶನೀಯ’ ಎಂದರು.
ಎಸ್ಪಿ ಹರೀಶ್ ಪಾಂಡೆ, ಉಪ ವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶುಭಾ ಸತ್ಯಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್, ಮುಖಂಡ ಎಚ್.ಡಿ. ತಮ್ಮಯ್ಯ ಇದ್ದರು.
ಕಡೂರಿನಲ್ಲಿ ಆಚರಣೆ
ಕಡೂರು: ಹೇಮರೆಡ್ಡಿ ಮಲ್ಲಮ್ಮ ಜಯಂತಿ ಪ್ರಯುಕ್ತ ಭಾನುವಾರ ತಾಲ್ಲೂಕು ಕಚೇರಿಯಲ್ಲಿ ಮಲ್ಲಮ್ಮನ ಭಾವಚಿತ್ರಕ್ಕೆ ಶಾಸಕ ಬೆಳ್ಳಿಪ್ರಕಾಶ್ ಪುಷ್ಪಾರ್ಚನೆ ಮಾಡಿ ಗೌರವಿಸಿದರು.
ಕೊರೊನಾ ಪ್ರಯುಕ್ತ ಯಾವುದೇ ಉಪನ್ಯಾಸ ಕಾರ್ಯಕ್ರಮವಿರಲಿಲ್ಲ. ಕಾರ್ಯಕ್ರಮ ಸಾಂಕೇತಿಕವಾಗಿ ನಡೆ ಯಿತು. ತಹಶೀಲ್ದಾರ್ ಉಮೇಶ್, ತಾಲ್ಲೂಕು ಪಂಚಾಯಿತಿ ಇಒ ಡಾ.ದೇವ ರಾಜ ನಾಯ್ಕ, ರೆಡ್ಡಿ ವೀರಶೈವ ಸಮಾ ಜದ ಎಚ್.ರೇವಣ ಸಿದ್ದಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.