ಚಿಕ್ಕಮಗಳೂರು: ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು, ವಿವಿಧ ಸಂಘಸಂಸ್ಥೆಗಳ ಸದಸ್ಯರು ಗಿರಿಶ್ರೇಣಿಯಲ್ಲಿ ಸ್ವಚ್ಛತಾ ಶನಿವಾರ ಕಾರ್ಯನಿರ್ವಹಿಸಿದರು.
ಜಿಲ್ಲಾ ಪಂಚಾಯಿತಿ, ಮಹಾತ್ಮ ಗಾಂಧಿ ಸೇವಾ ಟ್ರಸ್ಟ್, ಇತರ ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಶ್ರಮದಾನ ನಡೆಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ನಗರಸಭೆ ಆಯುಕ್ತ ಬಸವರಾಜು, ಗೌರಿಗದ್ದೆಯ ವಿನಯ್ ಗುರೂಜಿ, ಎನ್ಸಿಸಿ ತಂಡ, ಸ್ಕೌಟ್ ಮತ್ತು ಗೈಡ್ ತಂಡ, ಪೌರಕಾರ್ಮಿಕರು, ಗ್ರಾಮ ಪಂಚಾಯಿತಿಗಳ ಸ್ವಚ್ಛತಾ ಸಿಬ್ಬಂದಿ, ಅರಣ್ಯ ಸಿಬ್ಬಂದಿ ಸಹಿತ 500ಕ್ಕೂ ಹೆಚ್ಚು ಮಂದಿ ಈ ಕಾರ್ಯದಲ್ಲಿ ಭಾಗವಹಿಸಿದ್ದರು.
ವಿನಯ್ ಗುರೂಜಿ ಅವರು ಗಿಡಗಳನ್ನು ನೆಟ್ಟರು. ಸ್ವಚ್ಚತಾ ಕಾರ್ಯ ಮಾಡಿದರು.
ಕೈಮರ ಚೆಕ್ಪೋಸ್ಟ್ನಿಂದ ಕವಿಕಲ್ಗಂಡಿ, ಹೊನ್ನಮ್ಮನ ಹಳ್ಳ, ಬಾಬಾಬುಡ್ನ ಗಿರಿ, ಮಾಣಕ್ಯಧಾರಾ, ಗಾಳಿಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಬಾಟಲಿ, ಕಸಕಡ್ಡಿಯನ್ನು ಸಂಗ್ರಹಿಸಿ, ಸ್ವಚ್ಛತಾ ವಾಹಿನಿ, ಟಿಪ್ಪರ್ ವಾಹನ, ಟ್ರಾಕ್ಟರ್ಗಳಲ್ಲಿ ಕಸವನ್ನು ಸಾಗಿಲಾಯಿತು.
‘15 ಕಡೆಗಳಲ್ಲಿ 15 ತಂಡಗಳಾಗಿ ಸ್ವಚ್ಛತಾ ಕಾರ್ಯನಿರ್ವಹಿಸಲಾಯಿತು. ಕೋವಿಡ್ ಮಾರ್ಗಸೂಚಿ ಪಾಲಿಸಲಾಯಿತು. ಪ್ಲಾಸ್ಟಿಕ್, ಕಸ ಸಂಗ್ರಹಿಸ ವಿಲೇವಾರಿ ಮಾಡಲಾಯಿತು. ಗಿರಿಶ್ರೇಣಿ ಭಾಗದಲ್ಲಿ ಪ್ಲಾಸ್ಟಿಕ್, ಇತರ ಕಸ ಎಸೆಯುವವರಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಮುಂದಿನ ವಾರದಿಂದ ಆದೇಶ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.
‘ಗಿರಿ ಶ್ರೇಣಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಬಾಟಲಿಗಳು, ಲೋಟಗಳು, ಪ್ಲಾಸ್ಟಿಕ್ ಪೊಟ್ಟಣಗಳು, ಪ್ಲೇಟ್ಗಳನ್ನು ಚೀಲಗಳಿಗೆ ತುಂಬಿ ಸಾಗಿಸಿದೆವು. ಮಾರ್ಗದ ಉದ್ದಕ್ಕೂ ಇಕ್ಕೆಲದಲ್ಲಿ ಕಸಕಡ್ಡಿ ಬಿದ್ದಿದ್ದವು. ಗಿರಿಶ್ರೇಣಿಯಲ್ಲಿ ಪ್ರವಾಸಿಗರ ಮೋಜುಮಸ್ತಿಗೆ ಕಡಿವಾಣ ಹಾಕಬೇಕು. ಎಲ್ಲೆಂದರಲ್ಲಿ ಕಸ ಎಸೆಯದಂತೆ ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು’ ಎಂದು ಶ್ರಮದಾನದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಗಗನ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.