ಚಿಕ್ಕಮಗಳೂರು: ‘ಮೈಸೂರಿನ ಲಲಿತಾದ್ರಿಪುರದ ಗುಡ್ಡದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯು ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ, ಈಗ ಅವರ ಮೇಲೆ ಒತ್ತಡ ಹಾಕುವುದೂ ಒಳ್ಳೆಯದಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು.
ಕಡೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹೇಳಿಕೆ ಪಡೆಯಲು ಮಹಿಳಾ ಪೊಲೀಸ್ ಅಧಿಕಾರಿಗಳು ಪ್ರಯತ್ನಿಸಿದ್ದರು. ಸ್ವಲ್ಪ ದಿನಗಳ ನಂತರ ಸಂತ್ರಸ್ತೆಯು ಹೇಳಿಕೆ ನೀಡಬಹುದು. ಮನವೊಲಿಸುವ ಪ್ರಯತ್ನ ನಡೆಯುತ್ತಿವೆ’ ಎಂದು ಉತ್ತರಿಸಿದರು.
‘ಮಣಿಪಾಲದಲ್ಲಿ ನಡೆದಿದ್ದ ಪ್ರಕರಣದಲ್ಲೂ ಹೇಳಿಕೆ ನೀಡುವುದೇ ಇಲ್ಲ ಎಂದು ಮಹಿಳೆ ಆರಂಭದಲ್ಲಿ ಹೇಳಿದ್ದರು. ಆದರೆ ಮೂರು ತಿಂಗಳ ನಂತರ ಅವರು ಹೇಳಿಕೆ ನೀಡಿದ್ದನ್ನು ಗಮನಿಸಬಹುದು’ ಎಂದರು.
‘ಮೈಸೂರಿನ ಎರಡೂ ಪ್ರಕರಣಗಳನ್ನು ಪೊಲೀಸರು ಭೇದಿಸಿ ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಅಪರಾಧ ಕೃತ್ಯದಲ್ಲಿ ತೊಡಗುವವರಿಗೆ ಈ ಮೂಲಕ ದೊಡ್ಡ ಸಂದೇಶ ರವಾನೆಯಾಗಿದೆ’ ಎಂದರು.