ಚಿಕ್ಕಮಗಳೂರು: ನೋಂದಣಿಯಾಗಿರುವ ಹೋಂ ಸ್ಟೇಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.
ಚಿಕ್ಕಮಗಳೂರು ಕ್ಲಬ್ನಲ್ಲಿ ಮಂಗಳವಾರ ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ನ ವಾರ್ಷಿಕ ಸಮಾರಂಭ ಹಾಗೂ ಸದಸ್ಯರ ಸಭೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಹೊರ ರಾಜ್ಯ, ಜಿಲ್ಲೆಗಳಿಂದ ಪ್ರವಾಸಿಗರು ಜಿಲ್ಲೆಗೆ ಬರುತ್ತಾರೆ. ಇಲ್ಲಿರುವ ತಾಣಗಳು, ಸೂಕ್ತ ವ್ಯವಸ್ಥೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದಾಗ ಜಿಲ್ಲಾ ಪ್ರವಾಸೋದ್ಯಮ ಹೆಸರಾಗಲಿದೆ. ಸೆಲ್ಫಿ ಪಾಯಿಂಟ್ಗಳು, ಅಲ್ಲಂಪುರದಲ್ಲಿ ಮಾಹಿತಿ ಕೇಂದ್ರವನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಉತ್ಪನ್ನಗಳಖರೀದಿಗೆ ಪ್ರವಾಸಿಗರನ್ನು ಉತ್ತೇಜಿಸಬೇಕು. ಇದರಿಂದ ಜಿಲ್ಲೆಯ ಉದ್ದಿಮೆದಾರರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಹೋಂ ಸ್ಟೆಗಳು ಇವೆ. ಈ ಪೈಕಿ 525 ನೋಂದಣಿಯಾಗಿವೆ. ಉಳಿದವರು ನೋಂದಣಿ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕ್ರಮ ಜರುಗಿಸಲಾಗುವುದು ಎಂದರು.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಹೋಂ ಸ್ಟೆಗಳ ಪಾತ್ರವೂ ಇದೆ. ಸ್ವಚ್ಛತೆಗೆ ಒತ್ತು ನೀಡಬೇಕು. ಪ್ಲಾಸ್ಟಿಕ್ ಬಳಸಬಾರದು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್, ಅಸೋಸಿಯೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್.ಉತ್ತಮ್ ಗೌಡ, ಎಎಸ್ಪಿ ಕೃಷ್ಣಮೂರ್ತಿ, ಪ್ರವಾಸೋದ್ಯಮ ಇಲಾಖೆ ನೌಕರ ನಾಗರಾಜ್, ಅಸೋಸಿಯೇಷನ್ ಉಪಾಧ್ಯಕ್ಷ ದಯಾನಂದ್ ಮಾಕೋಡು, ಕಾರ್ಯದರ್ಶಿ ಅನ್ಸರ್ ಜಹೂರ್, ಕಾನೂನು ಸಲಹೆಗಾರ ಎನ್.ಆರ್.ತೇಜಸ್ವಿ, ಮಾಜಿ ಅಧ್ಯಕ್ಷ ಸಂಪತ್, ನಿರ್ದೇಶಕ ಶ್ರೀದೇವ್, ಮಮತಾ, ಹೊಲದಗದ್ದೆ ಗಿರೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.