ಚಿಕ್ಕಮಗಳೂರು: ಯುವಪೀಳಿಗೆಯು ಉತ್ತಮ ಸಂಸ್ಕಾರ, ವಿನಯ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಸ್.ಸೋಮ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆ ಸಹಯೋಗದೊಂದಿಗೆ ನಗರದ ಐಡಿಎಸ್ಜಿ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಹಿರಿಯರ ನಿಂದನೆ ತಡೆ ದಿನಾಚರಣೆ ಹಾಗೂ ಜಾಗೃತಿ ಬೀದಿ ನಾಟಕ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ನೈತಿಕ ಮೌಲ್ಯಗಳು ಕಡಿಮೆಯಾಗುತ್ತಿವೆ. ಹಿರಿಯ ನಾಗರಿಕರ ಜೀವನ ಅನುಭವ ಕಿರಿಯರಿಗೆ ಮಾರ್ಗದರ್ಶನವಾಗಿರುತ್ತದೆ. ಯುವಪೀಳಿಗೆಯು ಅದನ್ನು ಮನಗಾಣಬೇಕು. ಗುರುಹಿರಿಯರನ್ನು ಗೌರವಿಸಬೇಕು. ಪ್ರೀತಿಯಿಂದ ಕಾಣಬೇಕು, ಜವಾಬ್ದಾರಿ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ ಮಾತನಾಡಿ, ಹಿರಿಯ ನಾಗರಿಕರು ಸಮಸ್ಯೆಗಳನ್ನು ದೂರವಾಣಿ ಅಥವಾ ಲಿಖಿತವಾಗಿ ಇಲಾಖೆ ಗಮನಕ್ಕೆ ತರಬಹುದು. ಹಿರಿಯ ನಾಗರಿಕರ ಆಸ್ತಿಯನ್ನು ಮಕ್ಕಳು ಬಲವಂತವಾಗಿ ಸ್ವಾಧೀನಪಡಿಸಿಕೊಂಡರೆ, ಉಪವಿಭಾಗಾಧಿಕಾರಿ ಮೂಲಕ ಅದನ್ನು ಮರಳಿ ಪಡೆಯಬಹುದು ಎಂದು ಹೇಳಿದರು.
ಐಡಿಎಸ್ಜಿ ಕಾಲೇಜಿನ ಪ್ರಾಚಾರ್ಯ ಕೆ.ಎ.ರಾಜಣ್ಣ ಮಾತನಾಡಿ, ಹಿರಿಯರು ಸಮಾಜದ ಆಸ್ತಿ. ಜನರು ಮಾನವೀಯ ಮೌಲ್ಯ ಮರೆಯುತ್ತಿರುವುದರಿಂದ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎನ್.ಚರಣ್ರಾಜ್, ನಿವೃತ್ತ ನೌಕರರ ಸಂಘದ ಜಿಲ್ಲಾಘಟಕದ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಎನ್ಎಸ್ಎಸ್ ಸಂಯೋಜನಾಧಿಕಾರಿ ಇ.ಸತೀಶ್ ಇದ್ದರು.