ಹೈದರಾಬಾದ್: ಹಿಂದೂ ಧರ್ಮದವರಲ್ಲದ 45 ಮಂದಿ ಉದ್ಯೋಗಿಗಳನ್ನು ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ (ಟಿಟಿಡಿ) ಸೋಮವಾರ ಸೇವೆಯಿಂದ ವಜಾಗೊಳಿಸಿದೆ.
ಸ್ವರ್ಣಲತಾ ಎಂಬ ಉದ್ಯೋಗಿಯೊಬ್ಬರು ಟಿಟಿಡಿಯ ಅಧಿಕೃತ ಕಾರಿನಲ್ಲಿ ಚರ್ಚ್ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದ ವಿಡಿಯೊ ವೈರಲ್ ಆಗಿತ್ತು. ಹೀಗಾಗಿ ಈ ಉದ್ಯೋಗಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. 45 ದಿನಗಳ ಹಿಂದೆ ನೋಟಿಸ್ ಪಡೆದ ಪ್ರತಿಯೊಬ್ಬರಿಗೂ ಪ್ರತ್ಯೇಕ ಪತ್ರವನ್ನು ಟಿಟಿಡಿ ಕಳುಹಿಸಿದೆ.
ತಮ್ಮ ನೇಮಕಾತಿ ವೇಳೆ ಹಿಂದೂಗಳಲ್ಲ ಎಂದು ಅಫಿಡವಿಡ್ ಸಲ್ಲಿಸಿದ್ದ ಎಲ್ಲರ ಮೇಲೂ ತೂಗುಗತ್ತಿ ಇದೆ ಎಂದು ಮೂಲಗಳು ತಿಳಿಸಿವೆ. ವಜಾಗೊಂಡ ನೌಕರರನ್ನು ಸರ್ಕಾರದ ಇತರೆ ಇಲಾಖೆಗಳಲ್ಲಿ ನಿಯೋಜನೆಗೆ ಹಸ್ತಾಂತರಿಸುವ ಸಾಧ್ಯತೆ ಇದೆ. ಆದರೆ ನೌಕರರ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿದೆ.