ಶೃಂಗೇರಿ: ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಮಹಿಳೆಯರು ಧ್ವನಿ ಎತ್ತದೆ ಇರುವುದರಿಂದ, ಸಮಾನತೆ ಲಭಿಸುತ್ತಿಲ್ಲ ಎಂದು ಕಾರ್ಮಿಕ ಹೋರಾಟಗಾರ್ತಿ ರಾಧಾ ಸುಂದರೇಶ್ ಹೇಳಿದರು.
ಶೃಂಗೇರಿಯ ಕನ್ನಡ ಭವನದಲ್ಲಿ ಹಾಗಲಗಂಚಿ ಮಹಿಳಾ ಮನೆ ಮತ್ತು ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಮಾನವ ಕೃಷಿ ಪ್ರಾರಂಭಿಸುವ ಮೊದಲು ಮಾತೃ ಪ್ರಧಾನ ಸಮಾಜವಿತ್ತು. ವ್ಯವಸಾಯ ಶುರುವಾದ ಮೇಲೆ ಹೆಣ್ಣನ್ನು ನಿಯಂತ್ರಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಇವತ್ತು ಅದು ಎಲ್ಲದಕ್ಕೂ ಅವಳನ್ನೇ ದೋಷಿಯಾಗಿ ತೋರಿಸುವ ಮಟ್ಟಿಗೆ ಬೆಳೆದು ನಿಂತಿದೆ. ಪುರುಷರು ಒಪ್ಪಿದ್ದನ್ನು ಹೆಣ್ಣು ಅನುಮೋದಿಸಿದರೆ ಮಾತ್ರ ಅವಳನ್ನು ಸಮಾಜ ಒಪ್ಪುತ್ತದೆ. ಅದಕ್ಕೆ ಬದಲಾಗಿ ಅವಳ ದೃಷ್ಠಿಕೋನದ ಬಗ್ಗೆ ಹೇಳಲು ಹೊರಟರೆ, ಅಲ್ಲಿ ಅಪಸ್ವರಗಳು ಬರುತ್ತವೆ’ ಎಂದು ದೂರಿದರು.
ಅಧ್ಯಕ್ಷತೆ ವಹಿಸಿದ್ದ ಹಾಗಲಗಂಚಿ ಭಾಗ್ಯ ಮಾತನಾಡಿ, ದುಡಿಯುವ ವರ್ಗದ ಮಹಿಳೆಯರು ತಮಗಾಗುತ್ತಿರುವ ಅನ್ಯಾಯ ಪ್ರತಿಭಟಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಟಿ.ಎಲ್ ಉಮೇಶ್ ಮಾಹಿತಿ ನೀಡಿದರು. ನಿವೃತ್ತ ಆರೋಗ್ಯ ಸಹಾಯಕಿ ಎಸ್ತಲೀನಾ, ಶಿಕ್ಷಣ ಇಲಾಖೆಯ ಸಹಾಯಕಿ ಶಕುಂತಲಾ, ಆಶಾ ಕಾರ್ಯಕರ್ತೆ ಲಲಿತಾ, ಕೃಷಿ ಮಹಿಳೆ ಫಾತಿಮಾರನ್ನು ಗೌರವಿಸಿದರು.