ಚಿಕ್ಕಮಗಳೂರು:ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ, ಧ್ಯಾನ ಸಹಕಾರಿ ಎಂದು ಜಿಲ್ಲಾಸ್ಪತ್ರೆ ಮಾನಸಿಕ ಆರೋಗ್ಯ ತಜ್ಞ ಡಾ.ವಿನಯಕುಮಾರ್ ಸಲಹೆ ನೀಡಿದರು.
ರಾಷ್ಟ್ರೀಯ ಮಾನಸಿಕ ಆರೋಗ್ಯ ವಿಭಾಗ, ಸಂಚಲನ ಟ್ರಸ್ಟ್ ಸಹಯೋಗದೊಂದಿಗೆ ನಗರದ ಜಿಲ್ಲಾ ಕಾರಾಗೃಹದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಾನಸಿಕ ಆರೋಗ್ಯ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಜನರು ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಅದರಿಂದಲೇ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಕೆಲವರು ಮಾನಸಿಕ ಒತ್ತಡದಿಂದ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಜೀವನ ಶೈಲಿ ಬದಲಿಸಿಕೊಂಡಲ್ಲಿ ಉತ್ತಮ ಜೀವನ ಸಾಗಿಸಬಹುದು ಎಂದರು.
ಜಿಲ್ಲಾಕಾರಗೃಹದ ಡಿವೈಎಸ್ಪಿ ರಾಕೇಶ್ ಕಾಂಬಳೆ ಮಾತನಾಡಿ, ಜನರು ತಪ್ಪುಗಳನ್ನು ತಿದ್ದಿಕೊಂಡು ನಡೆದಾಗ ಬದುಕು ಸುಂದರವಾಗುತ್ತದೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಬೇಕು. ದೇಶಕ್ಕೆ ಕೈಲಾದ ಕೊಡುಗೆ ನೀಡಬೇಕು ಎಂದರು.
ಜೈಲರ್ ವಿಜಯಕುಮಾರ್ ಚೌವ್ಹಾಣ್, ಸಂಚಲನಾ ಟ್ರಸ್ಟ್ ಅಧ್ಯಕ್ಷ ಮಾವಿನಗುಣಿ ಎಂ.ಜಿ.ಲೋಕೇಶ್, ಸಮಾಜಮುಖಿ ನೌಕರರ ಸಂಘದ ಅಧ್ಯಕ್ಷ ನಾಗೇಶ್, ಪೊಲೀಸ್ ಇಲಾಖೆಯ ರವಿ, ಅಬಕಾರಿಇಲಾಖೆಯ ರಂಜನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.