ಅಜ್ಜಂಪುರ: ತಾಲ್ಲೂಕಿನ ಭಕ್ತನಕಟ್ಟೆ, ಹುಚ್ಚನಹಟ್ಟಿ, ದಾಸರ ಹಟ್ಟಿ ಗ್ರಾಮದಲ್ಲಿ ಜುಂಜಪ್ಪ ಸ್ವಾಮಿ ದೇವರ ಜಾತ್ರಾ ಮಹೋತ್ಸವ ಮಂಗಳವಾರ ನಡೆಯಿತು.
ಹುಚ್ಚನಹಟ್ಟಿಯಲ್ಲಿ ಈರಣ್ಣಜ್ಜ ಸ್ವಾಮಿ, ಜುಂಜಪ್ಪ ಸ್ವಾಮಿ ಉತ್ಸವ ಮೂರ್ತಿಯನ್ನು ಹೂವುಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಜಾನಪದ ಕಲಾತಂಡ, ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ಗುಡ್ಡೆ ಪ್ರವೇಶಕ್ಕೆ ಕರೆತರಲಾಯಿತು.
ಜನರು ಭಾರಿ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವಕ್ಕೆ ಬಂದಿದ್ದರು. ಭಕ್ತರು, ದೇವರ ದರ್ಶನ ಪಡೆದು, ಹೂ-ಹಣ್ಣು ಸಮರ್ಪಿಸಿ, ದುಗ್ಗಲ ಹೊತ್ತು ಹರಕೆ ತೀರಿಸಿದರು.
ಮನೆಮಂದಿಯೆಲ್ಲಾ ಜಾತ್ರೆಗೆ ಪ್ರತೀ ವರ್ಷ ಹಾಜರಾಗುತ್ತೇವೆ. ದೇವರ ದರ್ಶನ ಮಾಡಿ, ದುಗ್ಗಲ ಹೊತ್ತು ಪ್ರದಕ್ಷಿಣೆ ಹಾಕಿ ಹರಕೆ ತೀರಿಸುತ್ತೇವೆ ಎನ್ನುತ್ತಾರೆ ಶಿವನಿ ಗ್ರಾಮದ ರೈತ ಸೋಮಣ್ಣ.
ಆಟಿಕೆ ವಸ್ತು, ಹೂ-ಹಣ್ಣು-ಕಾಯಿ, ಸಿಹಿ ತಿನಿಸು-ಮಂಡಕ್ಕಿ , ತಂಪು ಪಾನೀಯ ಅಂಗಡಿಗಳು ಇದ್ದವು. ಆಟಿಕೆ, ಬೆಂಡು-ಬತಾಸ್- ಖಾರ-ಮಂಡಕ್ಕಿ ಖರೀದಿ ಜೋರಾಗಿತ್ತು. ವಾಹನ ದಟ್ಟಣೆ, ನೂಕು-ನುಗ್ಗಲು ಉಂಟಾಗದಂತೆ ಪೊಲೀಸರು ಕ್ರಮವಹಿಸಿದ್ದರು.
ಶಾಸಕ ಡಿ.ಎಸ್. ಸುರೇಶ್, ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ ಭೇಟಿ ನೀಡಿದ್ದರು. ಶಾಂತಿ- ಸುವ್ಯವಸ್ಥೆಗೆ 130 ಪೊಲೀಸರನ್ನು ನಿಯೋಜಿಸಲಾಗಿತ್ತು. ಪಿಎಸ್ಐ ಬಸವರಾಜು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.