ಕಡೂರು: ‘ಸಿರಿಧಾನ್ಯಗಳ ಬಳಕೆಯಿಂದ ನಮ್ಮ ಆರೋಗ್ಯ ಸ್ಥಿರವಾಗಿರುತ್ತದೆ ಎಂದು ವೈಜ್ಞಾನಿಕವಾಗಿ ಧೃಢವಾಗಿದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಯೋಜನಾಧಿಕಾರಿ ಪ್ರಸಾದ್ ತಿಳಿಸಿದರು.
ತಾಲ್ಲೂಕಿನ ಕಾಮೇನಹಳ್ಳಿ ಗ್ರಾಮದಲ್ಲಿ ಗುರುವಾರ ಯೋಜನೆಯ ಪ್ರಕಲ್ಪ ಮಹಿಳಾ ಜ್ಞಾನವಿಕಾಸ ಯೋಜನೆ ಹಮ್ಮಿಕೊಂಡಿದ್ದ ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಗಿ, ನವಣೆ, ಊದಲು, ಸಾಮೆ, ಸಜ್ಜೆ ಮುಂತಾದವುಗಳು ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನು ಹೊಂದಿವೆ. ಇವುಗಳ ನಿತ್ಯ ಬಳಕೆಯಿಂದ ಬಹಳಷ್ಟು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಆದ್ದರಿಂದ ಸಿರಿಧಾನ್ಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯೋನ್ಮುಖವಾಗಿದೆ’ ಎಂದರು.
ಕಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಯಮುನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯೋಗ, ಧ್ಯಾನ, ವ್ಯಾಯಾಮಗಳನ್ನು ಮಾಡಬೇಕು. ಅದರ ಜತೆಗೆ ಆರೋಗ್ಯಕ್ಕೆ ಸಮತೋಲಿತ ಆಹಾರ ಬಹುಮುಖ್ಯ. ಸಿರಿಧಾನ್ಯಗಳು ನಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾಗಿದೆ ಎಂಬುದನ್ನು ಎಲ್ಲರೂ ಅರಿಯಬೇಕಿದೆ.ಈ ನಿಟ್ಟಿನಲ್ಲಿ ಯೋಜನೆಯ ಕಾರ್ಯ ಶ್ಲಾಘನೀಯವಾದುದು’ ಎಂದರು.
ದೇವನೂರು ಗ್ರಾಮಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಕುಮಾರ್, ಉಪಾಧ್ಯಕ್ಷ ಷಣ್ಮುಖಪ್ಪ, ಸಿರಿಧಾನ್ಯ ಸಂಸ್ಥೆಯ ಭೂಮಿಕಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೇವನೂರು ವಲಯ ಮೇಲ್ವಿಚಾರಕ ಗಿರೀಶ್ ಕುಮಾರ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಲಕ್ಷ್ಮೀ, ಸೇವಾ ಪ್ರತಿನಿಧಿ ಕುಸುಮ, ಶೋಭಾ ಇದ್ದರು.