ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

Last Updated 24 ಡಿಸೆಂಬರ್ 2021, 12:06 IST
ಅಕ್ಷರ ಗಾತ್ರ

ಕಳಸ: ಪಟ್ಟಣದ ಹೊರವಲಯದ ಕರಿಮನೆ ಬಳಿಯ ಭದ್ರಾ ನದಿಯಲ್ಲಿ ಗುರುವಾರ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರುಪಾಲಾಗಿದ್ದು, ಒಬ್ಬನ ಮೃತದೇಹ ಪತ್ತೆಯಾಗಿದೆ.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿಯಮೂವರು ವಿದ್ಯಾರ್ಥಿಗಳು ತರಗತಿ ತಪ್ಪಿಸಿ ಗುರುವಾರ ರುದ್ರಪಾದಕ್ಕೆ ವಿಹಾರಕ್ಕೆ ತೆರಳಿದ್ದರು. ರುದ್ರಪಾದದಿಂದ ಭದ್ರಾ ನದಿ ಬಲದಂಡೆಯಲ್ಲೇ ಕೆಲ ದೂರ ಸಾಗಿದ್ದಾರೆ. ನಂತರ ಒಬ್ಬ ವಿದ್ಯಾರ್ಥಿ ವಾಪಸ್ ಮರಳಿದ್ದು, ಉಳಿದ ಇಬ್ಬರು ವಿದ್ಯಾರ್ಥಿಗಳಾದ ಹಿರೇಬೈಲಿನ ಕೋರೆ ಪ್ರದೇಶದ ಜೀವನದಾಸ್ (17) ಮತ್ತು ಹೆಮ್ಮಕ್ಕಿ ಗ್ರಾಮದ ಹೊಸೂರು ಪ್ರದೇಶದ ನಿಕ್ಷೇಪ್ (17) ನೀರಿಗೆ ಇಳಿದಿದ್ದಾರೆ.

ಗುರುವಾರ ರಾತ್ರಿಯಾದರೂ ಮಕ್ಕಳು ಮನೆಗೆ ಬಾರದಿರುವುದರಿಂದ ಆತಂಕಗೊಂಡ ಪೋಷಕರು ಮತ್ತು ಸ್ಥಳೀಯರು ಶುಕ್ರವಾರ ಬೆಳಿಗ್ಗೆ ಹುಡುಕಾಟ ನಡೆಸಿದಾಗ ಅವರ ಬ್ಯಾಗ್ ಭದ್ರಾ ನದಿ ತೀರದ ನೀರಿನ ಟ್ಯಾಂಕ್ ಕಂಡು ಬಂದಿದೆ. ಭದ್ರಾ ನದಿಯಲ್ಲಿ ಹುಡುಕಾಟ ನಡೆಸಿದಾಗ ಜೀವನದಾಸ್ ಶವ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ.

ನಿಕ್ಷೇಪ್‌ಗಾಗಿ ಶುಕ್ರವಾರ ಸಂಜೆಯವರೆಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕದ ಕಾರ್ಯಕರ್ತರು, ಮುಮ್ಮಗೆ, ಕಲ್ಲುಗೋಡು, ಎಡದಾಳು ಮತ್ತಿತರ ಪ್ರದೇಶದ ನಿವಾಸಿಗಳು ತೀವ್ರ ಹುಡುಕಾಟ ನಡೆಸಿದರು.

ವಿದ್ಯಾರ್ಥಿಗಳು ಮದ್ಯ ಸೇವಿಸಿರುವ ಕುರುಹುಗಳು ಸ್ಥಳದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳಸ ಠಾಣಾಧಿಕಾರಿ ಹರ್ಷವರ್ಧನ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT