ಚಿಕ್ಕಮಗಳೂರು: ಕನ್ನಡದ ನವ್ಯ ನಾಟಕಗಳಿಗೆ ಗಿರೀಶ್ ಕಾರ್ನಾಡ್ ಅವರು ಹೊಸ ರೂಪ ಕೊಟ್ಟರು ಎಂದು ಸಾಹಿತಿ ಬೆಳವಾಡಿಮಂಜುನಾಥ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಸುವರ್ಣ ಕನ್ನಡ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಾಹಿತಿ ಗಿರೀಶ್ ಕಾರ್ನಾಡ್ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಭಾರತೀಯ ನಾಟಕಗಳನ್ನು ಮತ್ತು ಸಾಹಿತ್ಯವನ್ನು ಪಾಶ್ಚಾತ್ಯ ಶೈಲಿಯಲ್ಲಿ ಹೇಗೆ ನೋಡಬಹುದು ಎಂಬುದನ್ನು ಗಿರೀಶ್ ಕಾರ್ನಾಡ್ ತೋರಿಸಿಕೊಟ್ಟರು. ನಾಡು ಮತ್ತು ನುಡಿಗೆ ಅವರು ಸಲ್ಲಿಸಿರುವ ಸೇವೆ ಅವಿಸ್ಮರಣೀಯವಾಗಿದೆ. ಅವರೊಬ್ಬ ಭಿನ್ನವಾಗಿ ಆಲೋಚಿಸುತ್ತಿದ್ದ ಅಪರೂಪದ ಸಾಹಿತಿ. ಅವರ ನಾಟಕಗಳು ಮತ್ತು ಕೃತಿಗಳು ಸಮಾಜ ತಿದ್ದುವಲ್ಲಿ ಸಹಕಾರಿಯಾಗಿವೆ ಎಂದರು.
ಸಿಪಿಐ ಮುಖಂಡ ಬಿ.ಅಮ್ಜದ್ ಮಾತನಾಡಿ, ಕಾರ್ನಾಡ್ ಅವರ ನಿಧನದಿಂದಾಗಿ ನಾಟಕ, ಸಿನಿಮಾ, ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದರು.
ಗಿರೀಶ್ ಕಾರ್ನಾಡ್ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ, ಖಜಾಂಚಿ ಪ್ರೊ.ಕೆ.ಎನ್.ಲಕ್ಷ್ಮೀಕಾಂತ್, ತಾಲ್ಲೂಕು ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಸದಸ್ಯರಾದ ರವೀಶ್ ಬಸಪ್ಪ, ಕಳವಾಸೆ ರವಿ, ನಿವೃತ್ತ ಉಪನ್ಯಾಸಕ ತಿಪ್ಪೇರುದ್ರಪ್ಪ ಇದ್ದರು.