ಮೂಡಿಗೆರೆ: ಕರ್ನಾಟಕ ಮಾರುಕಟ್ಟೆ ಕನ್ಸಲ್ಟೆಂಟ್ಸ್ ಮತ್ತು ಏಜೆನ್ಸಿಸ್ ಲಿಮಿಟೆಡ್ (ಎಂಸಿಎ) ಅಧ್ಯಕ್ಷ ಸ್ಥಾನ ತಿರಸ್ಕರಿಸುವುದಾಗಿ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ನಿಗಮ, ಮಂಡಳಿಗಳ ಅಧ್ಯಕ್ಷರ ನೇಮಕ ಪಟ್ಟಿ ಸೋಮವಾರ ಪ್ರಕಟವಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೆ ಯಾವುದೇ ನಿಗಮ, ಮಂಡಳಿಯ ಅಧ್ಯಕ್ಷ ಸ್ಥಾನವೂ ಬೇಡ. ಮೂಡಿಗೆರೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಒದಗಿಸಿದರೆ ಅಷ್ಟೆ ಸಾಕು’ ಎಂದು ಉತ್ತರಿಸಿದರು.
‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧವಾಗಲಿ, ಸರ್ಕಾರದ ವಿರುದ್ಧವಾಗಲಿ ಮಾತಾಡಲ್ಲ. ಅಧಿಕಾರದ ಆಸೆಯಿಲ್ಲ, ಅಧಿಕಾರಕ್ಕಿಂತಲೂ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ. ಕಳೆದ ವರ್ಷ ಅತಿವೃಷ್ಟಿಯಿಂದಾಗಿ ಮೂಡಿಗೆರೆ ಭಾಗದಲ್ಲಿ ಹಾನಿಗೀಡಾದ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಅದಕ್ಕೆ ಅನುದಾನ ಒದಗಿಸಿಕೊಟ್ಟರೆ ಸಾಕು’ ಎಂದರು.