ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣಗಿದ ಭೂಮಿಗೆ ಜಲ ಮರುಪೂರಣ ಕ್ರಾಂತಿ

Last Updated 6 ಫೆಬ್ರುವರಿ 2018, 7:08 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡ ಚೆಕ್‌ ಡ್ಯಾಂ ನಿರ್ಮಾಣ ಕ್ರಾಂತಿಯನ್ನೇ ಮಾಡಿದೆ. ಹಸಿರು ನಳನಳಿಸುತ್ತಿದೆ. ರೈತರಲ್ಲಿ ಕೃಷಿ ಬದುಕಿನ ಬಗ್ಗೆ ಅದಮ್ಯ ವಿಶ್ವಾಸ ಮೂಡಿದೆ.

ನದಿ ಮೂಲಗಳು ಇಲ್ಲದ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಮಳೆಯೇ ಆಶ್ರಯ. ಮಳೆ ಕೈಕೊಟ್ಟರೆ ವರ್ಷಪೂರ್ತಿ ಗೋಳು. ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ರೈತರ ಬದುಕು ದುಸ್ತರವಾಗಿತ್ತು. 1200 ಅಡಿ ಆಳ ಕೊಳವೆ ಬಾವಿ ಕೊರೆಸಿದರೆ ನೀರು ಸಹ ಸಿಗುತ್ತಿರಲಿಲ್ಲ. ಒಂದು ವೇಳೆ ನೀರು ಸಿಕ್ಕರೂ ಆರೇಳು ತಿಂಗಳಲ್ಲೇ ಕೊಳವೆಬಾವಿಗಳು ಒಣಗುತ್ತಿದ್ದವು. ಇದರಿಂದ ರೈತರು ಭೂಮಿ ಮಾರಿಕೊಳ್ಳಬೇಕಾದ ಸ್ಥಿತಿ ಎದುರಾಗಿತ್ತು.

ಈ ದುಸ್ಥಿತಿಯ ಕ್ಷೇತ್ರದ ರೈತರಿಗೆ ವರವಾಗಿ ಬಂದಿದ್ದು ಸಣ್ಣ ನೀರಾವರಿ ಇಲಾಖೆಯು ನಿರ್ಮಿಸಿದ ಚೆಕ್‌ ಡ್ಯಾಂಗಳು. ಇದಕ್ಕೆ ಶಾಸಕ ಬಿ.ಸುರೇಶ್‌ಗೌಡ ಅವರ ಒತ್ತಾಸೆ ಪ್ರಮುಖವಾಗಿದೆ. ರೈತರ ನೀರಿನ ಕಷ್ಟ ಪರಿಹಾರಕ್ಕೆ ಚೆಕ್‌ ಡ್ಯಾಂ ಅಶಾದಾಯಕವಾಗಿದೆ.

ಪ್ರಮುಖ ಬೆಳೆ: ಅಡಿಕೆ, ಹೂವು, ತರಕಾರಿ, ಬಾಳೆ, ತೆಂಗು ಇಲ್ಲಿನ ಪ್ರಮುಖ ಬೆಳೆಗಳು. ಶೇ 90ರಷ್ಟು ರೈತರು ಕೃಷಿ ಅವಲಂಬಿತರು. ‘ನಮ್ಮೂರಿನಲ್ಲಿ ಚೆಕ್‌ ಡ್ಯಾಂ ನಿರ್ಮಾಣದ ಬಳಿಕ  ಕೊಳವೆ ಬಾವಿಗಳಲ್ಲಿ, ಬಾವಿಗಳಲ್ಲಿ ನೀರು ಹೆಚ್ಚಾಗಿದೆ. ಬತ್ತಿದ್ದ ಬಾವಿಗಳು ಜೀವ ಪಡೆದಿವೆ ಎಂದು ಪಾಲಸಂದ್ರ ಗ್ರಾಮದ ರೈತ ಅಶೋಕ್ ಚೆಕ್‌ ಡ್ಯಾಂ ನಿರ್ಮಾಣದ ಪ್ರಯೋಜನಗಳ ಬಗ್ಗೆ ವಿವರಿಸಿದರು.

‘ನೀರಿಲ್ಲದೇ ದಿಕ್ಕು ತೋಚದಿದ್ದಾಗ ಶಾಸಕರು ಚೆಕ್‌ ಡ್ಯಾಂಗಳ ನಿರ್ಮಾಣಕ್ಕೆ ಮುಂದಾದರು. ನಮ್ಮ ತೋಟಗಳೂ ಉಳಿದುಕೊಂಡವು. ಈಗ ಅಡಿಕೆ, ತೆಂಗು ಬೆಳೆಗಾರರಲ್ಲಿ ಮಂದಹಾಸ ಮೂಡಿದೆ’ ಎಂದು ರೈತ ತಿಮ್ಮಪ್ಪ ಶಾಸಕರ ಕಾರ್ಯ ಶ್ಲಾಘಿಸುವರು.

ಸೋರೇಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ, ಹುಚ್ಚಬಸವನಹಳ್ಳಿ, ಮಸ್ಕಲ್, ವರದನಹಳ್ಳಿ, ಸ್ವಾಂದೇನಹಳ್ಳಿ, ಡಣಾನಾಯಕನಪುರ ಹೀಗೆ ಅನೇಕ ಕಡೆಗಳಲ್ಲಿ ಚೆಕ್‌ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಡಣಾನಾಯಕನಪುರ ಮತ್ತು ಕಾಡಗುಜ್ಜನಹಳ್ಳಿ ಹತ್ತಿರ ಹೊಸ ಕೆರೆಗಳನ್ನು ನಿರ್ಮಾಣ ಮಾಡಲಾಗಿದೆ. ಇವೆಲ್ಲ ಶಾಸಕರ ವಿಶೇಷ ಆಸಕ್ತಿಯಿಂದ ಕೈಗೊಂಡ ಕಾರ್ಯಗಳು ಎಂದು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಗಳು ಹೇಳುವರು.

ಚೆಕ್ ಡ್ಯಾಂ; ರೈತರಿಗೆ ಪ್ರಯೋಜನ

ಸಣ್ಣ ನೀರಾವರಿ ಇಲಾಖೆಯಿಂದ ₹ 1 ಕೋಟಿ, ₹ 50 ಲಕ್ಷ ವೆಚ್ಚ ಮಾಡಿ ಚೆಕ್‌ ಡ್ಯಾಂ ನಿರ್ಮಿಸಲಾಗಿದೆ. ಹತ್ತು ವರ್ಷದಲ್ಲಿ ಅಂದಾಜು ₹ 35 ಕೋಟಿ ಮೊತ್ತದಲ್ಲಿ ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಬಿ.ಸುರೇಶ್‌ಗೌಡ ವಿವರಿಸುವರು.

ಊರ್ಡಿಗೆರೆ, ಗೂಳೂರು, ಮಸ್ಕಲ್, ಪಾಲಸಂದ್ರ, ಸೋರೇಕುಂಟೆ, ಹೊನ್ನುಡಿಕೆ, ಅರೆಗುಜ್ಜನಹಳ್ಳಿ, ಸೋಂದೇನಹಳ್ಳಿ ಪಂಚಾಯಿತಿ ಸೇರಿದಂತೆ ಅನೇಕ ಕಡೆ ನಿರ್ಮಾಣ ಮಾಡಲಾಗಿದೆ. ದೇವರ ಅಮಾನಿಕೆರೆ, ನಾಗವಲ್ಲಿಯಲ್ಲಿ ರಾಜಕಾಲುವೆ ತೆರವು, ಸೇತುವೆ ನಿರ್ಮಾಣವನ್ನು ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

‘ಕ್ಷೇತ್ರದ ಎಲ್ಲೆಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂಬ ಬಗ್ಗೆ ಖುದ್ದು ಪರಿಶೀಲಿಸಲಾಯಿತು.  ಹರಿವ ನೀರನ್ನು ತಡೆದು ಬಳಸಿಕೊಂಡು ರೈತರಿಗೆ ಹೇಗೆ ಅನುಕೂಲ ಮಾಡಿಕೊಡಬಹುದು ಎಂಬುದರ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೆ. ನಿರೀಕ್ಷೆಯಂತೆ ರೈತರಿಗೆ ಪ್ರಯೋಜನವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT