ಕೊಪ್ಪ: ‘ಹಿಂದೂ ಯುವತಿಯೊಬ್ಬರಿಗೆ ಮಹಮ್ಮದ್ ರೌಫ್, ಇರ್ಫಾನ್, ಸೈಫ್ ಎಂಬುವರು ಮಾನಸಿಕ, ದೈಹಿಕ ಹಿಂಸೆ ನೀಡಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಸರ್ಕಲ್ ಇನ್ಸ್ಪೆಕ್ಟರ್ ಮಂಜು ಅವರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು, ‘ಆರೋಪಿಗಳು 3 ವರ್ಷಗಳಿಂದ ಯುವತಿಗೆ ಹಿಂಸೆ ನೀಡಿದ್ದಾರೆ. ಸಿಇಎನ್ ಪೊಲೀಸ್ ಠಾಣೆಯ ನಾಸಿರ್ ಹುಸೇನ್ ಅವರಿಗೆ ದೂರು ನೀಡಿದ್ದರೂ, ಪ್ರಕರಣ ದಾಖಲಿಸದೇ ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಆರೋಪಿಸಿದರು.
‘ಆರೋಪಿಗಳು ಯುವತಿಗೆ ಅಮಲು ಪದಾರ್ಥ ನೀಡಿ, ಫೊಟೊ ಮತ್ತು ವಿಡಿಯೋ ಚಿತ್ರೀಕರಣ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದಲ್ಲದೆ, ಯುವತಿಗೆ ಹಾಗೂ ಆಕೆಯ ಸಹೋದರನಿಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸಬೇಕು ಹಾಗೂ ಪ್ರಕರಣ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ ನಾಸಿರ್ ಹುಸೇನ್ ಅವರನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.
ಬಿಜೆಪಿ ಪಂಚಾಯತ್ ರಾಜ್ ಪ್ರಕೋಷ್ಠದ ಸಹ ಸಂಚಾಲಕ ಎಸ್.ಎನ್.ರಾಮಸ್ವಾಮಿ, ಬಜರಂಗದಳ ತಾಲ್ಲೂಕು ಸಂಚಾಲಕ ರಾಕೇಶ್ ಹಿರೇಕೊಡಿಗೆ, ಮುಖಂಡರಾದ ತಮ್ಮಣ್ಣ ಗೌಡ, ನಿತಿನ್, ಶ್ರುತಿ ರೋಹಿತ್, ಸುಧಾ ಮೋಹನ್ ಇದ್ದರು.