ಕೊಪ್ಪ: ‘ಕಾಂತಾರ ಸಿನಿಮಾಕ್ಕೆ ಮೂಲ ಪ್ರೇರಣೆಯಾಗಿದ್ದ, ತುಳುನಾಡಿನ ಸಂಸ್ಕೃತಿ ಬಿಂಬಿಸುವ ಭಕ್ತಿ ಪ್ರಧಾನವಾದ ‘ಶಿವದೂತೆ ಗುಳಿಗೆ’ ನಾಟಕವನ್ನು ‘ರಂಗ ಸಿಂಗಾರ’ ಸಂಸ್ಥೆ ವತಿಯಿಂದ ಡಿ.4 ರಂದು ಸಂಜೆ 6.30ಕ್ಕೆ ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ’ ಎಂದು ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.
ನಾಟಕ ಆಯೋಜನೆ ಬಗ್ಗೆ ಪ್ರಚಾರ ಪತ್ರ ಬಿಡುಗಡೆಗೊಳಿಸಿ, ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ತುಳು ರಂಗಭೂಮಿಯಲ್ಲಿ ನಾಟಕದ ಎಲ್ಲಾ ಸಾಧ್ಯತೆಗಳನ್ನು, ಯಕ್ಷಗಾನದ ಎಲ್ಲಾ ಸಾಧ್ಯತೆಗಳನ್ನು, ಸಿನಿಮಾ ರಂಗದ ಎಲ್ಲಾ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಒಂದು ಭಕ್ತಿ ಪ್ರಧಾನವಾದ ನಾಟಕ ಪ್ರದರ್ಶನ ಇದಾಗಿದೆ. 6 ಸಾವಿರ ಸೀಟುಗಳ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ಕಲಾಸಕ್ತರಿಗೂ ಉಚಿತವಾಗಿ ಪಾಸ್ ವಿತರಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಕಾಂತಾರ ಸಿನಿಮಾದಲ್ಲಿ ಗುರುವ ಪಾತ್ರ ಮಾಡಿರುವ ಸ್ವರಾಜ್ ಶೆಟ್ಟಿ ಅವರು ಈ ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ತುಳು ರಂಗಭೂಮಿಯಲ್ಲಿ ಯಶಸ್ವಿ ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲಬೈಲು ನಿರ್ದೇಶನದ, ಮಂಗಳೂರು ಕಲಾ ಸಂಗಮ ನಾಟಕ ತಂಡದಿಂದ ಪ್ರದರ್ಶನವಾಗುತ್ತಿದೆ. ‘ರಂಗ ಸಿಂಗಾರ’ ಸಂಸ್ಥೆ ಕಾರ್ಯಾಧ್ಯಕ್ಷ, ಶಾಸಕ ಟಿ.ಡಿ.ರಾಜೇಗೌಡ ಅವರ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದೆ’ ಎಂದರು.
‘ಉಚಿತ ಪಾಸ್ ಪಡೆಯಲು 9448241148, 8073316160, 9449946714, 7892490482, 9448407696 ನಂಬರ್ ಗೆ ಸಂಪರ್ಕಿಸಬಹುದು ಅಥವಾ ಪ್ರಚಾರ ಪತ್ರವನ್ನು ಯಾವ ಅಂಗಡಿ ಹಾಗೂ ವಾಹನಗಳಲ್ಲಿ ಅಳವಡಿಸಿಕೊಂಡಿರು ತ್ತಾರೆಯೋ ಅಂತವರ ಬಳಿ ಪಾಸ್ ಪಡೆದುಕೊಳ್ಳಬಹುದು’ ಎಂದು ತಿಳಿಸಿದರು.
ಮಲೆನಾಡು ಜನಪರ ಒಕ್ಕೂಟದ ಅಧ್ಯಕ್ಷ ಅನಿಲ್ ಹೊಸಕೊಪ್ಪ, ಕ್ಷೇತ್ರ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ, ಮುಖಂಡರಾದ ಹರೀಶ್ ಭಂಡಾರಿ, ಎಚ್.ಎಸ್.ಇನೇಶ್, ನುಗ್ಗಿ ಮಂಜುನಾಥ್, ವಿಜಯಕುಮಾರ್, ರಶೀದ್, ಜೆ.ಎಂ.ಶ್ರೀಹರ್ಷ, ಬರ್ಕತ್ ಆಲಿ, ನವೀನ್ ಮಾವಿನಕಟ್ಟೆ ಮುಂತಾದವರು ಇದ್ದರು.