ತರೀಕೆರೆ: ಪಟ್ಟಣದಲ್ಲಿ ಶ್ರೀ ಗುರುರೇವಣಸಿದ್ದೇಶ್ವರ ಗರಡಿ ಕುಸ್ತಿ ಯುವಕ ಸಂಘದ ವತಿಯಿಂದ ಮೂರು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿ ಗದೆಯನ್ನು ವಿಜಾಪುರದ ಪೈಲ್ವಾನ್ ರಾಮಚಂದ್ರಪ್ಪ ಜಯಿಸಿದರು.
ಶುಕ್ರವಾರ ರಾತ್ರಿ ಸುಮಾರು ಹದಿನೈದು ನಿಮಿಷಗಳ ಕಾಲ ನಡೆದ ಆಕರ್ಷಕ ಸೆಣಸಾಟದಲ್ಲಿ ಕಲಬುರ್ಗಿಯ ಪೈಲ್ವಾನ್ ಅಪ್ಪಾ ಸಾಹೇಬರನ್ನು ಮಣಿಸುವ ಮೂಲಕ ರಾಮಚಂದ್ರಪ್ಪ ವಿಜೇತರಾದರು.
ಪಾಳೆಗಾರ ಸರ್ಜಾ ಹನುಮಪ್ಪ ನಾಯಕರ ಹೆಸರಿನಲ್ಲಿ ನೀಡಲಾಗುವ ಅಖಾಡದ ಬಳೆಯನ್ನು ದಾವಣಗೆರೆಯ ಮಂಜು ಇವರನ್ನು ಮಣಿಸುವ ಮೂಲಕ ಕಡೆ ನಂದಿಹಳ್ಳಿಯ ಶ್ರೀನಿವಾಸ ತನ್ನದಾಗಿಸಿಕೊಂಡರು. ಬೆಳ್ಳಿ ಕಿರೀಟವನ್ನು ಶಿವಮೊಗ್ಗದ ಶ್ರೀಕಾಂತ ಅವರು ವಿಜಾಪುರದ ರಾಮಣ್ಣರನ್ನು ಮಣಿಸುವ ಮೂಲಕ ಹಾಗೂ ಜಮಖಂಡಿಯ ಗಜಾನಂದ ಅವರು ಕಪ್ಪನಹಳ್ಳಿಯ ಸತೀಶರನ್ನು ಮಣಿಸುವ ಮೂಲಕ ಪಡೆದುಕೊಂಡರು.
ಬಹುಮಾನ ವಿತರಣೆ ಸಮಾರಂಭದಲ್ಲಿ ಮಾಜಿ ಶಾಸಕರಾದ ಜಿ.ಎಚ್.ಶ್ರೀನಿವಾಸ್, ಟಿ.ಎಚ್.ಶಿವಶಂಕರಪ್ಪ, ಎಸ್.ಎಂ.ನಾಗರಾಜ್, ಮುಖಂಡರಾದ ಟಿ.ವಿ.ಶಿವಶಂಕರಪ್ಪ, ಟಿ.ಎನ್.ಗೋಪಿನಾಥ್, ಪದ್ಮರಾಜು, ಪ್ರಕಾಶ್ ವರ್ಮಾ, ರಮೇಶ್, ಧರ್ಮರಾಜ್, ಕುಸ್ತಿ ಸಂಘದ ಅಧ್ಯಕ್ಷ ರಘು ಇದ್ದರು.