ಚಿಕ್ಕಮಗಳೂರು: ಕಾಫಿನಾಡಿನ ವಿವಿಧೆಡೆಗಳಿಂದ 813 ವಲಸೆ ಕಾರ್ಮಿಕರನ್ನು ಕೆಎಸ್ಆರ್ಟಿಸಿ ಬಸ್ಗಳಲ್ಲಿ ತವರು ಜಿಲ್ಲೆಗಳಿಗೆ ಗುರುವಾರ ಕಳಿಸಲಾಯಿತು.
ಬಳ್ಳಾರಿ, ಹಾವೇರಿ, ಗದಗ, ರಾಯಚೂರು, ಕೊಪ್ಪಳ, ದಾವಣಗೆರೆ, ಶಿವಮೊಗ್ಗ, ಹಾಸನ, ಚಿತ್ರದುರ್ಗ ಜಿಲ್ಲೆಗಳಿಗೆ ಬಸ್ಗಳು ತೆರಳಿವೆ. ತಾಲ್ಲೂಕುವಾರು ಚಿಕ್ಕಮಗಳೂರಿನಿಂದ 430, ಮೂಡಿಗೆರೆಯಿಂದ 258, ನರಸಿಂಹರಾಜಪುರದಿಂದ 75 ಹಾಗೂ ಶೃಂಗೇರಿಯಿಂದ 50 ವಲಸೆ ಕಾರ್ಮಿಕರು ಊರುಗಳಿಗೆ ಪ್ರಯಾಣ ಬೆಳೆಸಿದರು.
ಈ ಕಾರ್ಮಿಕರು ಹೊಟೇಲ್, ತೋಟ, ಕಟ್ಟಡ ಮೊದಲಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೆ ಪರಿತಪಿಸುವಂತಾಗಿತ್ತು.
‘ನಮ್ಮೂರಿಗಿಂತ ಇಲ್ಲಿ ತೋಟದ ಕೂಲಿ ಕೆಲಸಕ್ಕೆ ಪಗಾರ ಜಾಸ್ತಿ. ಹೀಗಾಗಿ ಕೆಲಸಕ್ಕೆ ಇಲ್ಲಿಗೆ ಬಂದಿದ್ದೆವು. ಲಾಕ್ಡೌನ್ನಿಂದಾಗಿ ಕೆಲಸ ಇಲ್ಲವಾಗಿದೆ. ಈಗ ವಾಪಸ್ ಹೊರಟಿದ್ದೇವೆ. ಉದ್ಯೋಗ ಖಾತ್ರಿ (ನರೇಗಾ) ಜಾಬ್ ಕಾರ್ಡ್ ಇದೆ, ಊರಲ್ಲೇ ಏನಾದರೂ ಕೆಲಸ ಮಾಡುತ್ತೇನೆ’ ಎಂದು ಹಾವೇರಿ ಜಿಲ್ಲೆಯ ಹಾನಗಲ್ನ ರಾಮಪ್ಪ ತಿಳಿಸಿದರು.
‘ಚಿಕ್ಕಮಗಳೂರು ತಾಲ್ಲೂಕಿನಿಂದ ಮೂರು ದಿನಗಳಿಂದ 696 ವಲಸೆ ಕಾರ್ಮಿಕರನ್ನು 28 ಬಸ್ಗಳಲ್ಲಿ ತವರು ಜಿಲ್ಲೆಗಳಿಗೆ ಕಳಿಸಲಾಗಿದೆ’ ಎಂದು ತಹಶೀಲ್ದಾರ್ ನಂದಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.