ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಜಾವೂರು ಗೇಟ್ ಬಳಿ ವಾಹನಕ್ಕೆ ಸಿಲುಕಿ ಸಾವಿಗೀಡಾದಐದು ವರ್ಷದ ಗಂಡು ಚಿರತೆಯ ಮೃತದೇಹ ಭಾನುವಾರ ರಾತ್ರಿ ಪತ್ತೆಯಾಗಿದೆ.
ರಸ್ತೆ ಬದಿ ಚಿರತೆ ಬಿದ್ದಿರುವುದನ್ನು ನೋಡಿದ ಸಾರ್ವಜನಿಕರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ವಲಯ ಅರಣ್ಯಾಧಿಕಾರಿ (ಆರ್ ಎಫ್ಒ) ಮಂಜುನಾಥ್, ಸಿಬ್ಬಂದಿ ಬಂದು ಪರಿಶೀಲನೆ ಮಾಡಿದ್ದಾರೆ.
ಚಿರತೆಯ ಬಲಗಾಲು ಊದಿದೆ. ಕಳೇಬರದ ಮೇಲೆ ಯಾವುದೇ ಗಾಯದ ಗುರುತುಗಳು ಇಲ್ಲ ಎಂದು ಆರ್ ಎಫ್ಒ ಮಂಜುನಾಥ್ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ಚಿರತೆಗೆ ವಾಹನ ಗುದ್ದಿಕೊಂಡು ಹೋಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಸೋಮವಾರ ನಡೆಯಲಿದೆ.