ಚಿಕ್ಕಮಗಳೂರು/ತರೀಕೆರೆ: ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿನ ಹಿನ್ನೀರು ಪ್ರದೇಶದ ದಡದಲ್ಲಿ ಗಂಡಾನೆ ಮರಿ ಕಳೇಬರ ಶನಿವಾರ ಪತ್ತೆಯಾಗಿದೆ.
ಭದ್ರಾ ಹಿನ್ನೀರು ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಮಧ್ಯಾಹ್ನ ಗಸ್ತು ತಿರುಗುವಾಗ ಆನೆ ಮರಿಯ ಶವ ಕಾಣಿಸಿದೆ. ದಡದ ಬಳಿ ಇದ್ದ ಕಳೇಬರವನ್ನು ಸಿಬ್ಬಂದಿ ಹೊರಕ್ಕೆ ತಂದಿದ್ದಾರೆ.
ಸಹಾಯಕ ಅರಣ್ಯಾಧಿಕಾರಿ ರತ್ನಪ್ರಭ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಆನೆ ಮರಿ ಮೃತಪಟ್ಟು ಮೂರ್ನಾಲ್ಕು ದಿನಗಳಾಗಿರಬಹುದು. ದೇಹದ ಮೇಲೆ ಕಾದಾಡಿದ ಗುರುತುಗಳಿರಲಿಲ್ಲ’ ಎಂದು ತಿಳಿಸಿದರು.
‘ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತಾಯಿಯಿಂದ ಬೇರ್ಪಟ್ಟು ಆಹಾರವಿಲ್ಲದೆ ಮೃತಪಟ್ಟಿರಬಹುದು ಎಂದು ವೈದರು ಹೇಳಿದ್ದಾರೆ’ ಎಂದರು.