ಚಿಕ್ಕಮಗಳೂರು: ತಾಲ್ಲೂಕಿನ ಮಸಗಲಿ ಸಹಿತ ಇತರಡೆಗಳಲ್ಲಿ ಶುಕ್ರವಾರ ಅರಣ್ಯ ಇಲಾಖೆಯವರು ನಡೆಸಿದ ಒತ್ತುವರಿ ತೆರವು ಕಾರ್ಯಚರಣೆಗೆ ವಿರೋಧ ವ್ಯಕ್ತವಾಯಿತು. ತೆರವು ಕಾರ್ಯಾಚರಣೆಗೆ ಬಂದಿದ್ದವರು ಮತ್ತು ಸ್ಥಳೀಯರ ನಡುವೆ ವಾಗ್ವಾದ ನಡೆಯಿತು.
ಕೋವಿಡ್ ‘ಕಂಟಕ’ದ ಈ ಸಂದರ್ಭದಲ್ಲಿ ಇಲ್ಲಿಂದ ನಾವು ಎಲ್ಲಿಗೆ ಹೋಗಬೇಕು ಎಂದು ಗೋಳು ತೋಡಿಕೊಂಡರು. ಗಿಡಗಳನ್ನು ಖುಲ್ಲಾಗೊಳಿಸಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರು.
ಯಾವುದಕ್ಕೂ ಕಿವಿಗೊಡದೆ ಸಿಬ್ಬಂದಿ ಕಾರ್ಯಾಚರಣೆ ಮಾಡಿದರು. ಮಚ್ಚು, ಯಂತ್ರಗಳಿಂದ ಕಾಫಿ, ಅಡಿಕೆ, ಮೆಣಸು ಬಳ್ಳಿಗಳನ್ನು ಕತ್ತರಿಸಿದರು. ಸಾಗುವಳಿ ಮಾಡಿದ್ದ ಗಿಡಗಳನ್ನು ಕತ್ತರಿಸುವುದನ್ನು ನೋಡಿ ಅಳುತ್ತಾ ಕೆಲವರು ಅಂಗಲಾಚಿದರು.
ತಾಲ್ಲೂಕಿನ ಮಸಗಲಿ, ಬೆರಣಗೋಡು, ಹೇಮರಹಳ್ಳಿ, ಹೊಸ್ಕೆರೆ ಇತರೆಡೆಗಳಲ್ಲಿ ಅರಣ್ಯ ಸಿಬ್ಬಂದಿ ತೆರವು ಕಾರ್ಯಾಚರಣೆ ಮಾಡಿದರು. ಬೆಳ್ಳಂಬೆಳಿಗ್ಗೆ 5ರಿಂದ ಸಂಜೆ 6 ಗಂಟೆವರೆಗೆ ಕಾರ್ಯಾಚರಣೆ ನಡೆದಿದೆ. ಒಟ್ಟಾರೆ ಐದು ತಂಡಗಳು ಪೊಲೀಸ್ ಸುಪರ್ದಿಯಲ್ಲಿ ಕಾರ್ಯನಿರ್ವಹಿಸಿದವು.
ಮಸಗಲಿ ಗ್ರಾಮಸ್ಥ ಎಂ.ಎಸ್.ಲಕ್ಷ್ಮಣ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಅರಣ್ಯ ಸಿಬ್ಬಂದಿ ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಕುಟುಂಬಗಳಿಗೆ ದಿಕ್ಕತೋಚದಂತಾಗಿದೆ‘ ಎಂದು ಅಳಲು ತೋಡಿಕೊಂಡರು.
‘ಸುಪ್ರೀಂ ಕೋರ್ಟ್ ಆದೇಶಕ್ಕೆ ಬದ್ಧರಾಗಿದ್ದೇವೆ. ಸಾರಗೋಡು, ತತ್ಕೊಳ, ಕುಂದೂರು ಪ್ರದೇಶದವರಿಗೆ ಕೊಟ್ಟ ರೀತಿಯಲ್ಲೇ ನಮಗೂ ಪರಿಹಾರ ಒದಗಿಸಿ ಎಂದು ಬೇಡಿಕೆ ಇಟ್ಟಿದ್ದೇವೆ’ ಎಂದು ಹೇಳಿದರು.
‘ಪುನರ್ವಸತಿ ಕಲ್ಪಿಸಿದ ನಂತರ ತೆರವು ಮಾಡಿಸಬೇಕು ಎಂದು ಕೋರ್ಟ್ ಹೇಳಿದೆ. ವಸತಿ ನಿರ್ಮಿಸಿಕೊಳ್ಳಲು ಜಾಗ ತೋರಿಸದೆ ಹೊರ ಹಾಕಲು ಮುಂದಾಗಿದ್ದಾರೆ’ ಎಂದು ದೂಷಿಸಿದರು.