ನರಸಿಂಹರಾಜಪುರ: ರಾಜ್ಯ ಅಡಿಕೆ ಸಹಕಾರ ಮಹಾ ಮಂಡಲದ ವತಿಯಿಂದ ಗೃಹ ಸಚಿವ ಹಾಗೂ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರಾಜ್ಯ ಸಚಿವೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿ ಅಡಿಕೆಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ರಾಜ್ಯ ಅಡಿಕೆ ಸಹಕಾರ ಮಹಾ ಮಂಡಲದ ಅಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ ತಿಳಿಸಿದ್ದಾರೆ.
‘ವಿದೇಶದಿಂದ ಆಮದಾಗುತ್ತಿರುವ ಅಡಿಕೆಗೆ ಕನಿಷ್ಠ 1ಕೆ.ಜಿಗೆ ₹360 ಆಮದು ಬೆಲೆ ಹೆಚ್ಚಿಸಬೇಕು. ವಿದೇಶಗಳಿಂದ ಅಕ್ರಮವಾಗಿ ಹಾಗೂ ಅನಧಿಕೃತವಾಗಿ ಬರುತ್ತಿರುವ ಎಲ್ಲಾ ಅಡಿಕೆಗಳನ್ನು ನಿಲ್ಲಿಸಬೇಕು. ಅಡಿಕೆಗೆ ಸಂಬಂಧಪಟ್ಟ ಮಾಹಿತಿ ನೀಡಲು ಅನು ಕೂಲವಾಗುವಂತೆ ತಾಂತ್ರಿಕ ಸಮಿತಿ ರಚಿಸಬೇಕು ಎಂದು ಮನವಿ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
ನಿಯೋಗದಲ್ಲಿ ಶಾಸಕ ಹರತಾಳು ಹಾಲಪ್ಪ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಅಡಿಕೆ ಮಹಾ ಮಂಡಲದ ಉಪಾಧ್ಯಕ್ಷ ಶಶಾಂಕ ಹೆಗಡೆ, ನಿರ್ದೇಶಕರಾದ ಶಿವಕುಮಾರ್, ಸೊರಬ ಮಂಜಪ್ಪ, ಕಿಶೋರ್ ಕೊಡಗಿ, ಆರ್.ಎಂ.ರವಿ ಇದ್ದರು.