ಚಿಕ್ಕಮಗಳೂರು: ಸಚಿವ ಸಿ.ಟಿ.ರವಿ ಅವರಿಗೂ ಕೋವಿಡ್ ದೃಢಪಟ್ಟಿದೆ. ಹೀಗಾಗಿ ಅವರು ಮನೆ ಕ್ವಾರಂಟೈನ್ನಲ್ಲಿದ್ದಾರೆ ಎಂದು ಸಚಿವ ಸುಧಾಕರ್ ಹೇಳಿದರೆ, ಇದಕ್ಕೆ ತಿರುಗೇಟು ನೀಡಿದ ರವಿ, ‘ನಾನು ಚೆನ್ನಾಗಿದ್ದೇನೆ, ಕೊರೊನಾ ಲಕ್ಷಣ ಇಲ್ಲ,ಮನೆಯಲ್ಲಿ ವಾಕ್ ಮಾಡುತ್ತಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಇದರ ಬಗ್ಗೆ ಸುಧಾಕರ್ ಅವರನ್ನು ಕೇಳಿದರೆ,‘ನನಗೆ ದೊರೆತಿರುವ ಮಾಹಿತಿಯಂತೆ ರವಿ ಅವರಿಗೆ ಎ ಸಿಮ್ಟಮ್ಯಾಟಿಕ್ ಇದೆ. ಅದಕ್ಕಾಗಿ ಮನೆ ಕ್ವಾರಂಟೈನ್ನಲ್ಲಿದ್ದಾರೆ’ ಎಂದರು.
ಈ ಬಗ್ಗೆ ಮಾತನಾಡಿರುವ ರವಿ, ‘ಕೋವಿಡ್ ಪರೀಕ್ಷೆಗೆ ಇದೇ 10 ರಂದು ಮಾದರಿ ನೀಡಿದ್ದೆ. ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಅವರು ವರದಿ ನೋಡಿ ಸೋಂಕು ದೃಢಪಟ್ಟಿರುವ ಬಗ್ಗೆ ಹೇಳಿಕೆ ನೀಡಿರಬಹುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿಳಿಸಿದರು.
‘ಸೋಂಕು ದೃಢಪಟ್ಟಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ವರದಿ ತರಿಸಿಕೊಂಡು ನೋಡುತ್ತೇನೆ. ಇದೇ 6ರಂದು ಪರೀಕ್ಷೆ ಮಾಡಿಸಿದ್ದೆ, ಆಗ ನೆಗೆಟಿವ್ ಬಂದಿತ್ತು’ ಎಂದು ಪ್ರತಿಕ್ರಿಯಿಸಿದರು.
‘ಕೋವಿಡ್ ಸೋಂಕಿನ ಯಾವುದೇ ಲಕ್ಷಣಗಳೂ ಇಲ್ಲ. ನಗರದ ರಾಮನಹಳ್ಳಿಯ ಫಾರ್ಮ್ಹೌಸ್ನಲ್ಲಿ ಇದ್ದೇನೆ. ಹೋಂ ಕ್ವಾರಂಟೈನ್ನಲ್ಲಿ ಇದ್ದೇನೆ’ ಎಂದರು.