ಮೂಡಿಗೆರೆ: ತಾಲ್ಲೂಕಿನ ಗೌಡಹಳ್ಳಿ ಸಮೀಪದ ಹೆಮ್ಮದಿ ಗ್ರಾಮದಲ್ಲಿ ಭಾನುವಾರ ನಸುಕಿನಲ್ಲಿ ದಾಳಿ ನಡೆಸಿರುವ ಕಾಡಾನೆಗಳು ಅಪಾರ ಪ್ರಮಾಣದ ಬೆಳೆ ನಾಶಗೊಳಿಸಿವೆ.
ನಸುಕಿನ ಮೂರು ಗಂಟೆ ಸುಮಾರಿಗೆ ಗ್ರಾಮಕ್ಕೆ ದಾಳಿ ನಡೆಸಿದ ಮೂರು ಕಾಡಾನೆಗಳು, ಎಂ.ಎಸ್. ಹರೀಶ್ ಕೊಳಗಾಮೆ ಎಂಬುವರ ತೋಟಕ್ಕೆ ನುಗ್ಗಿ ಕಾಫಿ, ಬಾಳೆ, ಅಡಿಕೆ, ಕಾಳುಮೆಣಸು ಬೆಳೆಗಳನ್ನು ನಾಶ ಮಾಡಿವೆ.
‘ಗೌಡಹಳ್ಳಿ, ಕುಂಬರಡಿ, ಬೈದುವಳ್ಳಿ, ಹೆಮ್ಮದಿ, ಸತ್ತಿಗನಹಳ್ಳಿ ಊರುಬಗೆ ಮೂಲರಹಳ್ಳಿ, ಭಾಗದಲ್ಲಿ ಹದಿನೈದದು ದಿನಗಳಿಂದಲೂ ಮೂರು ಕಾಡಾನೆಗಳು ಬೀಡುಬಿಟ್ಟಿದ್ದು, ಹಗಲಿನಲ್ಲಿ ಅರಣ್ಯ ಸೇರುವ ಕಾಡಾನೆಗಳು, ರಾತ್ರಿಯಾಗುತ್ತಿದ್ದಂತೆ ಗ್ರಾಮದೊಳಗೆ ಬರ ತೊಡಗಿವೆ.
ಇತ್ತೀಚೆಗೆ ಸತ್ತಿಗನಹಳ್ಳಿಯ ಪ್ರಭಾಕರ್ ಎಂಬುವರು ಬೈಕ್ ಸವಾರಿ ಮಾಡಿಕೊಂಡು ಬರುತ್ತಿರುವಾಗ ಕಾಡಾನೆ ದಾಳಿ ನಡೆಸಿ ಬೈಕನ್ನು ಪುಡಿ ಮಾಡಿದ್ದು, ಬೈಕ್ ಸವಾರ ತಪ್ಪಿಸಿಕೊಂಡಿದ್ದರು. ಕಾಡಾನೆಗಳ ನಿರಂತರ ದಾಳಿಯಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ಸ್ಥಳಾಂತರಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.