ಚಿಕ್ಕಮಗಳೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲಾಧ್ಯಂತ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಒಟ್ಟು 1,424ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ.
ಅದಾಲತ್ನಲ್ಲಿ ರಸ್ತೆ ಅಪಘಾತ, ಚೆಕ್ ಬೌನ್ಸ್, ನೀರಿನ ಬಿಲ್, ಬ್ಯಾಂಕ್ ಸಾಲ ವಸೂಲಿ, ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ ಪ್ರಕರಣ, ಮೋಟಾರು ವಾಹನ, ನಿವೇಶನ ಮಾರಾಟ ಒಳಗೊಂಡಂತೆ ಜಿಲ್ಲಾಧ್ಯಂತ ಒಟ್ಟು7,956 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಆಹ್ವಾನಿಸಲಾಗಿತ್ತು.
ಜಿಲ್ಲೆಯ ಎಲ್ಲ ತಾಲ್ಲೂಕುಗಳ ನ್ಯಾಯಾಲಯಗಳಲ್ಲಿ ಬೆಳಿಗ್ಗೆ 10ಗಂಟೆಯಿಂದ ಸಂಜೆ 5 ಗಂಟೆವರೆಗೆ ಅದಾಲತ್ ನಡೆಯಿತು. 22ನ್ಯಾಯಾಧೀಶರು ಹಾಗೂ 22 ಸಮಾಲೋಚನಾ ವಕೀಲರು ಅದಾಲತ್ ನಡೆಸಿಕೊಟ್ಟರು. ಕೆಲ ಅರ್ಜಿದಾರರು ವಕೀಲರ ಜತೆ ಅದಾಲತ್ನಲ್ಲಿ ಭಾಗವಹಿಸಿದ್ದರು. ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿದಾರರ ಜಂಗುಳಿ ಇತ್ತು. ಸರದಿಯಲ್ಲಿ ಪ್ರಕರಣಗಳ ಇತ್ಯರ್ಥ ನಡೆಯಿತು.
1,526 ಸಿವಿಲ್ ಪ್ರಕರಣಗಳ ಪೈಕಿ 218 ಹಾಗೂ 1,413 ಚೆಕ್ ಬೌನ್ಸ್ ಪ್ರಕರಣಗಳು ಪೈಕಿ, 140 ಮತ್ತು 225 ಕೌಟುಂಬಿಕ ವ್ಯಾಜ್ಯಗಳ ಪೈಕಿ 2, ಕಾರ್ಮಿಕರಿಗೆ ಸಂಬಂದಪಟ್ಟ 8 ಪ್ರಕರಣಗಳ ಪೈಕಿ, 3ನ್ನು ಇತ್ಯರ್ಥ ಪಡಿಸಲಾಗಿದೆ. ಎಸ್ಬಿಐ ಬ್ಯಾಂಕ್, ಬಿಎಎಸ್ಎನ್ಎಲ್ ಸಂಸ್ಥೆ ಹೆಚ್ಚು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದವು.
‘ನಿವೇಶನಕ್ಕೆ ಸಂಬಂದಪಟ್ಟಂತೆ ಆರು ತಿಂಗಳಿನಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅದಾಲತ್ನಲ್ಲಿ ಪಾಲ್ಗೊಂಡು ಇತ್ಯರ್ಥಪಡಿಸಿಕೊಳ್ಳುವಂತೆ ವಕೀಲರು ಸಲಹೆ ನೀಡಿದರು. ಅದರಂತೆ ಅರ್ಜಿ ಸಲ್ಲಿಸಿದ್ದೇನೆ. ಸಮಸ್ಯೆ ಬಗೆಹರಿಯುವ ನಂಬಿಕೆ ಇದೆ’ಎಂದು ನಗರದ ಗೃಹಮಂಡಳಿ ಬಡಾವಣೆ ನಿವಾಸಿ ಗಂಗಮ್ಮ ಹೇಳಿದರು.